ಚಿತ್ತಾಪುರ | ಮಾನಸಿಕ ಅಶಕ್ತ ಮಕ್ಕಳ ಮಾಸಾಶನ ಮೂರು ತಿಂಗಳಿಂದ ಸ್ಥಗಿತ: ಸಂಕಷ್ಟದಲ್ಲಿ ಕುಟುಂಬ

ಚಿತ್ತಾಪುರ: ಪಟ್ಟಣದ ಖಾಜಿಪುರ ಪ್ರದೇಶದಲ್ಲಿ ವಾಸಿಸುತ್ತಿರುವ ಖಾಜಿ ನಜೀಮೊದ್ದಿನ್ (ಅಂಜುಮ್) ಅವರ ಇಬ್ಬರು ಮಾನಸಿಕ ಅಶಕ್ತರು ಮಕ್ಕಳಿಗೆ ಕಳೆದ ಮೂರು ತಿಂಗಳಿಂದ ಮಾಸಾಶನ ಹಣ ಜಮೆಯಾಗದೆ ಇರುವುದರಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಬಾಕಿ ಇರುವ ಮಾಸಾಶನ ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಖಾಜಿಪುರ ನಿವಾಸಿ ಖಾಜಿ ನಜೀಮೊದ್ದಿನ್ ಅವರು ಸುಮಾರು ಇಪ್ಪತ್ತು ವರ್ಷಗಳ ಕಾಲ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿದ್ದರು. ವಯೋಸಹಜ ಕಾರಣಗಳಿಂದ ಆ ಕೆಲಸವನ್ನು ತೊರೆದು, ಪ್ರಸ್ತುತ ಮನೆಯ ಸಮೀಪ ಸಣ್ಣ ಅಂಗಡಿ ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಇಬ್ಬರು ಮಾನಸಿಕ ಅಶಕ್ತ ಮಕ್ಕಳಿದ್ದು, ಪ್ರೌಢಾವಸ್ಥೆಗೆ ಬಂದಿದ್ದರೂ ಸ್ವಯಂ ಜೀವನ ನಡೆಸುವ ಸಾಮರ್ಥ್ಯ ಹೊಂದಿಲ್ಲ. ತಂದೆ-ತಾಯಿ ಆರೈಕೆ ಮಾಡಿದಾಗ ಮಾತ್ರ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸುವ ಪರಿಸ್ಥಿತಿಯಲ್ಲಿದ್ದಾರೆ.
ಕೊರೊನಾ ಅವಧಿಯಲ್ಲಿ ಪತ್ನಿಯನ್ನು ಕಳೆದುಕೊಂಡಿರುವ ನಜೀಮೊದ್ದಿನ್ ಅವರು, ಈಗ ಮಕ್ಕಳ ಆರೈಕೆ ಹಾಗೂ ಜೀವನ ನಿರ್ವಹಣೆಯ ಹೊಣೆಗಾರಿಕೆಯನ್ನು ಏಕಾಂಗಿಯಾಗಿ ನಿಭಾಯಿಸುತ್ತಿದ್ದಾರೆ. ಕಡು ಬಡತನದ ನಡುವೆಯೂ ಮಕ್ಕಳ ಚಿಕಿತ್ಸಾ ವೆಚ್ಚ, ಆಹಾರ ಮತ್ತು ಇತರ ಅಗತ್ಯಗಳನ್ನು ಪೂರೈಸಲು ಹರಸಾಹಸ ಪಡುತ್ತಿದ್ದಾರೆ.
ಸರ್ಕಾರದಿಂದ ಪ್ರತಿ ಮಗುವಿಗೆ ಮಾಸಾಶನವಾಗಿ ದೊರೆಯುವ ಹಣವೇ ಕುಟುಂಬದ ಪ್ರಮುಖ ಆಧಾರವಾಗಿತ್ತು. ಆದರೆ ಕಳೆದ ಮೂರು ತಿಂಗಳಿಂದ ಮಾಸಾಶನ ಜಮೆಯಾಗದ ಕಾರಣ ಮಕ್ಕಳಿಗೆ ಅಗತ್ಯವಿರುವ ಮಾತ್ರೆಗಳು, ಸಿರಪ್ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳ ಆರೋಗ್ಯದಲ್ಲಿಯೂ ಏರುಪೇರಾಗುತ್ತಿರುವುದಾಗಿ ನಜೀಮೊದ್ದಿನ್ ಅವರು ಅಳಲು ತೋಡಿಕೊಂಡಿದ್ದಾರೆ.
“ಮಾಸಾಶನಕ್ಕಾಗಿ ಸಂಬಂಧಪಟ್ಟ ಕಚೇರಿಗಳಿಗೆ ಅಲೆದಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮಕ್ಕಳ ಆರೈಕೆ ಮತ್ತು ಚಿಕಿತ್ಸೆಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಪ್ರಕರಣವನ್ನು ಪರಿಗಣಿಸಿ, ಬಾಕಿ ಇರುವ ಮೂರು ತಿಂಗಳ ಮಾಸಾಶನವನ್ನು ತಕ್ಷಣ ಬಿಡುಗಡೆ ಮಾಡಿ ಫಲಾನುಭವಿಗಳ ಮನೆಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






