Chitapur | ವೈಜ್ಞಾನಿಕ ಕುರಿ-ಮೇಕೆ ಸಾಕಾಣಿಕೆ ತರಬೇತಿ

ಚಿತ್ತಾಪುರ : ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ವೈಜ್ಞಾನಿಕವಾಗಿ ನಡೆಸುವ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಬಹುದು ಎಂಬ ಉದ್ದೇಶದಿಂದ ಪಟ್ಟಣದ ಪಶುಪಾಲನಾ ಸಭಾಂಗಣದಲ್ಲಿ ಎರಡು ದಿನಗಳ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕಾರ್ಯಕ್ರಮ ನಡೆಯಿತು.
ಪಶುಪಾಲನಾ ಇಲಾಖೆ ಚಿತ್ತಾಪುರ ಹಾಗೂ ಪಶು ವೈದ್ಯಕೀಯ ತರಬೇತಿ ಕೇಂದ್ರ ಕಲಬುರಗಿ ಸಹಯೋಗದಲ್ಲಿ ಆಯೋಜಿಸಲಾದ ತರಬೇತಿಯಲ್ಲಿ ತಾಲೂಕಿನ ಸುಮಾರು 70 ಮಂದಿ ಕುರಿ-ಮೇಕೆ ಸಾಕಾಣಿಕೆದಾರರು ಹಾಗೂ ಆಸಕ್ತ ರೈತರು ಭಾಗವಹಿಸಿದರು.
ತರಬೇತಿಯಲ್ಲಿ ಕುರಿ ಮತ್ತು ಮೇಕೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳ ಲಕ್ಷಣಗಳು, ಮುಂಜಾಗ್ರತಾ ಲಸಿಕೆಗಳು, ಜಂತುನಾಶಕ ಔಷಧಿಗಳ ಬಳಕೆ, ವೈಜ್ಞಾನಿಕ ಸಾಕಾಣಿಕೆ ವಿಧಾನಗಳು, ಶೆಡ್ ನಿರ್ಮಾಣ, ವಿವಿಧ ತಳಿಗಳ ಆಯ್ಕೆ ಹಾಗೂ ಪೌಷ್ಟಿಕ ಪಶು ಆಹಾರದ ಕುರಿತು ನುರಿತ ಪಶುವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಕುರಿ ಮತ್ತು ಮೇಕೆಗಳ ಆರೋಗ್ಯ ನಿರ್ವಹಣೆ, ಉತ್ಪಾದಕತೆ ಹೆಚ್ಚಿಸುವ ವಿಧಾನಗಳು ಹಾಗೂ ಆಧುನಿಕ ಸಾಕಾಣಿಕೆ ತಂತ್ರಗಳ ಕುರಿತು ರೈತರಿಗೆ ಪ್ರಾಯೋಗಿಕ ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಲಾಯಿತು.
ಕಲಬುರಗಿ ತರಬೇತಿ ಕೇಂದ್ರದ ಉಪನಿರ್ದೇಶಕ ಡಾ. ದಯಾನಂದ ಹಕ್ಕಪಕ್ಕಿ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಸಹಾಯಕ ನಿರ್ದೇಶಕ ಡಾ. ಶಂಕರ ಕಣ್ಣಿ, ಉಪನ್ಯಾಸಕರಾಗಿ ಡಾ. ಶರಣಬಸಪ್ಪ ಲಿಂಗದಳ್ಳಿ, ಡಾ. ಮಂಜುನಾಥ್, ಡಾ. ಅಭೀಲಾಶ್, ಡಾ. ಆಕಾಶ್, ಪೃಥ್ವಿ ಸಾಗರ್, ಸಿಬ್ಬಂದಿ ವರ್ಗದವರಾದ ವೀರಣ್ಣ, ರತನ್ ಕುಮಾರ್, ವಿಜಯಕುಮಾರ್, ಅಜಯ್ ಕುಮಾರ್ ಸೇರಿದಂತೆ ಇತರರು ಇದ್ದರು.






