2023ರ ಚುನಾವಣೆಯಲ್ಲಿ ಸೋಲಿಸಲು ಮತಗಳ್ಳತನದ ಷಡ್ಯಂತ್ರ ನಡೆದಿತ್ತು: ಶಾಸಕ ಬಿ.ಆರ್. ಪಾಟೀಲ್ ಆರೋಪ

ಕಲಬುರಗಿ: 2023ರ ವಿಧಾನಸಭಾ ಚುನಾವಣೆ ವೇಳೆಗೆ ಆಳಂದ ಮತಕ್ಷೇತ್ರದಲ್ಲಿರುವ ಆರು ಸಾವಿರಕ್ಕೂ ಹೆಚ್ಚು ನನ್ನ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಷಡ್ಯಂತ್ರ ನಡೆದಿತ್ತು ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷರೂ ಆಗಿರುವ ಆಳಂದ ಶಾಸಕ ಬಿ.ಆರ್ ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಬಲಿಗರನ್ನು ಮತದಾರರಪಟ್ಟಿಯಿಂದ ಅಳಿಸಿ ಹಾಕಲು ನಕಲಿ ಫಾರಂ-7 ಬಳಸಿದ್ದರು. ತೆಗೆದು ಹಾಕಲು ಸಲ್ಲಿಕೆಯಾಗಿದ್ದ 6,018 ಅರ್ಜಿಗಳ ಪೈಕಿ 24 ಅರ್ಜಿಗಳ ಮಾತ್ರವೇ ನೈಜವೆಂದು ಗೊತ್ತಾಗಿತ್ತು. ಉಳಿದಂತೆ 5,994 ಅರ್ಜಿಗಳು ನಕಲಿ ಎಂದು ಗೊತ್ತಾಗಿತ್ತು. ಈಗ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ʼವೋಟ್ ಚೋರಿʼ ಅಭಿಯಾನಕ್ಕೆ ಆಳಂದ ಕ್ಷೇತ್ರದ ಪ್ರಕರಣವೇ ದೊಡ್ಡ ಜೀವಂತ ಸಾಕ್ಷಿಯಾಗಿದೆ ಎಂದರು.
ಈ ಕುರಿತಂತೆ ಆಗಿನ ಚುನಾವಣಾಧಿಕಾರಿ ಮಮತಾ ಕುಮಾರಿ ಅವರು, ಆಳಂದ ವಿಧಾನಸಭಾ ಮತಕ್ಷೇತ್ರದಲ್ಲಿ 254 ಮತಗಟ್ಟೆಗಳಿಂದ 5994 ಮತದಾರರ ಪಟ್ಟಿಯಿಂದ ಮೂಲ ಮತದಾರರ ಗಮನಕ್ಕೆ ಬಾರದೆ ಪಟ್ಟಿಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರುವ ತಪ್ಪಿತಸ್ಥರ ವಿರೋಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರೂ ತಾರ್ಕಿಕ ಅಂತ್ಯ ಕಾಣಲಿಲ್ಲ. ಹಾಗಾಗಿ ನಮ್ಮ ಸರ್ಕಾರ ಬಂದ ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು. ಸಿಐಡಿಗೂ ಚುನಾವಣಾ ಆಯೋಗವು ನಕಲಿ ಅರ್ಜಿಗಳನ್ನು ಸಲ್ಲಿಸಿದ ಸಾಧನಗಳನ್ನು ಗುರುತಿಸಲು ಅಗತ್ಯವಿರುವ ಡೆಸ್ಟಿನೇಷನ್ ಐಪಿಗಳು ಹಾಗೂ ಪೋರ್ಟ್ ವಿವರಗಳನ್ನು ನೀಡದೆ ಇರುವುದರಿಂದ ತನಿಖೆ ಅಲ್ಲಿಗೆ ನಿಂತು ಹೋಗಿದೆ. ಈಗ ಅದು ಸೈಬರ್ ಕ್ರೈಂ ನಲ್ಲಿ ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು.
ಬಿಜೆಪಿಯನ್ನೇ ಅಧಿಕಾರದಲ್ಲಿ ಕೂರಿಸುವ ಯತ್ನ ಚುನಾವಣಾ ಆಯೋಗದ್ದು:
ಮತದಾರರ ಪಟ್ಟಿಯಿಂದ ಆರು ಸಾವಿರಕ್ಕೂ ಹೆಚ್ಚಿನ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಷಡ್ಯಂತ್ರ ಮಾಡುತ್ತಿರುವುದರ ಹಿಂದೆ ಯಾರ ಕೈವಾಡವಿದೆ ಎಂಬುದರ ಪತ್ತೆ ಹಚ್ಚಬೇಕು. ಈಗಾಗಲೇ ಪ್ರಕರಣ ದಾಖಲಾಗಿದ್ದರೂ ತನಿಖೆಗೆ ಚುನಾವಣಾ ಆಯೋಗ ಯಾಕೆ ಸಹರಿಸುತ್ತಿಲ್ಲ? ಸಂವಿಧಾನ ಬದ್ಧವಾಗಿರುವ ಸಂಸ್ಥೆ ಬಿಜೆಪಿಯನ್ನೇ ಅಧಿಕಾರದಲ್ಲಿ ಕೂರಿಸಲು ಯತ್ನ ಮಾಡುತ್ತಿದೆ ಎಂದ ಅವರು, ಇಂತಹ ಘಟನೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದು ಬಿಆರ್ ಪಾಟೀಲ್ ವಾಗ್ದಾಳಿ ನಡೆಸಿದರು.
ಈಗಾಲೇ ಮತಗಳ್ಳತನ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ, ವೇಣುಗೋಪಾಲ ಸೇರಿದಂತೆ ಹಲವರು ಟ್ವೀಟ್ ಮಾಡಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ದತ್ತಾಂಶ ತಂಡವೂ ಮಾಹಿತಿ ಪಡೆದಿದ್ದು, ಪಕ್ಷವೂ ನನ್ನ ಜೊತೆ ನಿಂತಿದೆ ಎಂದರು.







