ಸಹಕಾರ ಸಂಸ್ಥೆಗಳು ಸಮಾಜಮುಖಿ ಸೇವೆಗೆ ಆದ್ಯತೆ ನೀಡಲಿ: ಬಾಬುರಾವ ಯಡ್ರಾಮಿ

ಕಲಬುರಗಿ: ಸಹಕಾರ ಸಂಸ್ಥೆಗಳು ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ, ಸದಸ್ಯರು ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕೂ ಆದ್ಯತೆ ನೀಡಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು.
ನಗರದ ಭವಾನಿ ನಗರ ರಿಂಗ್ರೋಡ್ನ ಬಬಲಾದ ಮಠದ ಸಮೀಪದ ಓಂ ಶ್ರೀ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ವತಿಯಿಂದ ಆಯೋಜಿಸಿದ್ದ 2025–26ನೇ ಸಾಲಿನ 14ನೇ ವಾರ್ಷಿಕ ಸರ್ವಸಾಮಾನ್ಯ ಸಭೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಕ್ಷೇತ್ರವು ಜನರ ಆರ್ಥಿಕ ಪ್ರಗತಿಯ ಜೊತೆಗೆ ಆರೋಗ್ಯ, ಶಿಕ್ಷಣ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತನ್ನ ಪಾತ್ರ ವಿಸ್ತರಿಸಬೇಕು. ಇಂತಹ ಉಚಿತ ಆರೋಗ್ಯ ಶಿಬಿರಗಳು ಬಡವರು ಹಾಗೂ ಮಧ್ಯಮ ವರ್ಗದವರಿಗೆ ತಜ್ಞ ವೈದ್ಯರ ಸಲಹೆ ಪಡೆಯಲು ಸಹಕಾರಿಯಾಗುತ್ತವೆ ಎಂದರು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಎಸ್. ಪರಸರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ರಾಮಪ್ಪ ಎಚ್. ಬಿರಬಿಟ್ಟೆ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಕಲಬುರಗಿ ಪ್ರಾಂತ್ಯದ ವ್ಯವಸ್ಥಾಪಕ ಸಂಜೀವ ಕೊರಟ್ಟರ್, ಉದ್ಯಮಿ ಹಣಮಂತ ಎಸ್. ಪೂಜಾರಿ, ಪ್ರತಾಪರಾವ ಜಿ. ಕಾಕಡೆ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಶ್ರೀ ಆರೈಕೆ ಆಸ್ಪತ್ರೆ, ಗ್ಯಾಸ್ಟ್ರೋ ಲಿವರ್ ಮಲ್ಟಿಸ್ಪೆಷಾಲಿಟಿ ಸೆಂಟರ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್, ಹೆಪಟಾಲಜಿಸ್ಟ್ ಹಾಗೂ ಥೆರಪ್ಯೂಟಿಕ್ ಎಂಡೋಸ್ಕೋಪಿಸ್ಟ್ ಡಾ. ಶ್ರೀನಿತ್ ಬಿ. ಪಾಟೀಲ್ ಮತ್ತು ಫಿಸಿಷಿಯನ್ ಹಾಗೂ ಡಯಾಬಿಟಾಲಜಿಸ್ಟ್ ಡಾ. ಶ್ರೀಗೌರಿ ರೆಡ್ಡಿ ಪಾಟೀಲ್ ಆರೋಗ್ಯ ತಪಾಸಣೆ ನಡೆಸಿದರು. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ಥೈರಾಯ್ಡ್ ಸೇರಿದಂತೆ ಗ್ಯಾಸ್ಟ್ರೋ, ಲಿವರ್, ಪ್ಯಾಂಕ್ರಿಯಾಸ್, ಪಿತ್ತಕೋಶ ಹಾಗೂ ಕರುಳಿನ ಸಮಸ್ಯೆಗಳ ಕುರಿತು ಉಚಿತ ವೈದ್ಯಕೀಯ ಸಲಹೆ ನೀಡಲಾಯಿತು. ಶಿಬಿರದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆರೋಗ್ಯ ಸೇವೆಯ ಪ್ರಯೋಜನ ಪಡೆದರು.






