ಅತಿವೃಷ್ಟಿ ಹಾನಿ | ಕಲಬುರಗಿ ಜಿಲ್ಲೆಗೆ 250.97 ಕೋಟಿ ರೂ. ಪರಿಹಾರ ಮಂಜೂರು : ಡಿಸಿ ಫೌಝಿಯಾ ತರನ್ನುಮ್

ಕಲಬುರಗಿ : ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಬೆಳೆಗಳಿಗೆ ರಾಜ್ಯ ಸರಕಾರ ಎಸ್.ಡಿ.ಆರ್.ಎಫ್/ ಎನ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಜಿಲ್ಲೆಯ 3.26 ಲಕ್ಷ ರೈತರಿಗೆ 250.97 ಕೋಟಿ ರೂ. ಪರಿಹಾರ ಮಂಜೂರಾತಿ ನೀಡಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಅಪಾರ ಪ್ರಮಾಣದಲ್ಲಿ ಬಿದ್ದ ಮಳೆಯಿಂದ 3.24 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ, ತೋಟಗಾರಿಕೆ ಪ್ರದೇಶ ಹಾನಿಯಾಗಿದ್ದಕ್ಕೆ ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದೀಗ ಸರಕಾರ ಪರಿಹಾರ ತಂತ್ರಾಂಶದಲ್ಲಿ ಅರ್ಹ ರೈತರ ಹಾಗೂ ಹಾನಿ ಪ್ರದೇಶದ ದತ್ತಾಂಶದನ್ವಯ ಮೊದಲನೆ ಹಂತದಲ್ಲಿ SDRF/NDRF ಮಾರ್ಗಸೂಚಿಯನ್ವಯ ಜಿಲ್ಲೆಯ 3,26,183 ಫಲಾನುಭವಿ ರೈತರಿಗೆ ಒಟ್ಟು 250.97 ಕೋಟಿ ರೂ. ಹಣ ಮಂಜೂರಾತಿ ನೀಡಲಾಗಿದ್ದು, ಇನ್ ಪುಟ್ ಸಬ್ಸಿಡಿ ನೇರವಾಗಿ ಆಧಾರ ಸಂಖ್ಯೆಗೆ ಜೋಡಣೆ ಹೊಂದಿರುವ ಸಂಬಂದಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಮುಂದಿನ 3-4 ದಿನಗಳಲ್ಲಿ ಪರಿಹಾರ ಹಣ ಜಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.





