ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ, ಗೂಂಡಾಗಿರಿ ಸಹಿಸುವುದಿಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್

ಸೇಡಂ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಪರಸ್ಪರ ಗೌರವಕ್ಕೆ ಆದ್ಯತೆ ನೀಡಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಮತ್ತು ಗೂಂಡಾಗಿರಿ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದರು.
ತಾಲೂಕಿನ ರಂಜೋಳ ಗ್ರಾಮದಲ್ಲಿ ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಒಂಬತ್ತು ಗ್ರಾಮ ದೇವತೆಗಳ ದೇವಸ್ಥಾನಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗ್ರಾಮದಲ್ಲಿ ನಡೆದ ಅಹಿತಕರ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದರು.
ಗ್ರಾಮದ ಜನರು ಅಹಿತಕರ ಘಟನೆ ನಡೆದರೂ ಶಾಂತಿ ಮತ್ತು ತಾಳ್ಮೆಯಿಂದ ನಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅವರ ಸಹನೆಯನ್ನು ಅಭಿನಂದಿಸಬೇಕು. ರಾಜಕೀಯ ಕಾರಣಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಿ ತಮ್ಮ ಹಿಡಿತ ಸಾಧಿಸಲು ಯತ್ನಿಸುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಹೇಳಿದರು.
ತಾವು ಸೇಡಂ ಕ್ಷೇತ್ರದ ಶಾಸಕನಾಗಿರುವವರೆಗೂ ಇಂತಹ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ. ಅಧಿಕಾರ ಇಲ್ಲದಿರುವಾಗಲೇ ರಂಪಾಟ ನಡೆಸುವವರು ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪರೋಕ್ಷವಾಗಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
“ನಾವು ಶಾಂತಿಯನ್ನು ಬಯಸುವವರು. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶವಿದ್ದರೂ ಪ್ರತಿಯೊಂದು ವಿಚಾರವನ್ನು ಸಂಘರ್ಷದ ಮೂಲಕ ಎದುರಿಸುವುದು ನಮ್ಮ ಉದ್ದೇಶವಲ್ಲ. ಸುಮ್ಮನಿದ್ದೇವೆ ಎಂದರೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದಲ್ಲ. ಸಮಯ ಬಂದಾಗ ಸೂಕ್ತ ಉತ್ತರ ನೀಡಲು ನಾವು ಸಿದ್ಧರಿದ್ದೇವೆ,” ಎಂದು ಸಚಿವರು ಹೇಳಿದರು.
ರಂಜೋಳ ಗ್ರಾಮದ ಮುಖಂಡ ಸತೀಶರೆಡ್ಡಿ ರಂಜೋಳ ಮಾತನಾಡಿ, ತಾವು ರಾಜಕೀಯ ಅನಿವಾರ್ಯತೆಯಿಂದಲ್ಲ, ಸ್ವಇಚ್ಛೆಯಿಂದ ಸಚಿವ ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ಇದ್ದೇನೆ ಎಂದು ಹೇಳಿದರು.
“ಸೇಡಂ ಕ್ಷೇತ್ರಕ್ಕೆ ಒಳ್ಳೆಯ ನಾಯಕ ಬೇಕು ಎಂಬ ನಿಸ್ವಾರ್ಥ ಭಾವನೆಯಿಂದ ಅವರೊಂದಿಗೆ ಇದ್ದೇನೆ. ಇದಕ್ಕಾಗಿ ವಿರೋಧ ಪಕ್ಷದವರು ಹಾಗೂ ಮಾಜಿ ಶಾಸಕರು ನನ್ನ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ. ಇದಕ್ಕೆ ರಂಜೋಳದ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ,” ಎಂದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರಿಗೆ ಪೂಜೆ ಮಾಡಲು ಅಡ್ಡಿಪಡಿಸಿದವರಿಗೆ ಸಮಾರಂಭಕ್ಕೆ ಹರಿದುಬಂದ ಜನಸ್ತೋಮವೇ ಉತ್ತರ ನೀಡಿದೆ ಎಂದು ಹೇಳಿದ ಅವರು, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರ ಹಿಂದೆ ಕೆಲವೇ ಸ್ಥಳೀಯ ಕಾರ್ಯಕರ್ತರಿದ್ದು, ಬಹುತೇಕ ಗ್ರಾಮಸ್ಥರು ತಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಖಾ ಮಠದ ಶ್ರೀಗಳು, ಗೌಡನಳ್ಳಿ ಶ್ರೀಗಳು, ಶರಣು ಬಿ. ಗದ್ದುಗೆ ಸೇರಿದಂತೆ ಬಸವರಾಜ ಪಾಟೀಲ, ರಾಜೂಗೌಡ ಬೆನಕಳ್ಳಿ, ರವಿ ಸಾಹುಕಾರ್ ತಂಬಾಕೆ, ನಾರಾಯಣರೆಡ್ಡಿ ರಂಜೋಳ, ರಶೀದ್ ರಂಜೋಳ, ರಾಜು ಬಳಗಾರ, ನರಸಿಂಹರೆಡ್ಡಿ, ವಿರೇಂದ್ರ ರುದ್ನೂರು, ರಾಮಯ್ಯ ಪೂಜಾರಿ, ಸತೀಶ್ ಪೂಜಾರಿ, ಉಮಾರೆಡ್ಡಿ ಹಂದರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






