ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 29 ಮಂದಿ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದ ಅನ್ನಪೂರ್ಣ ಕ್ರಾಸ್ ಸಮೀಪದಲ್ಲಿರುವ ಕಲಾ ಮಂಡಳ ಸಭಾಗೃಹದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ ಸರಡಗಿಯ ಹಿರೇಮಠ ಸಂಸ್ಥಾನದ ಡಾ.ರೇವಣಸಿದ್ಧ ಶಿವಾಚಾರ್ಯರು, ಎಲ್ಲಾ ಭಾಷೆಗಳಲ್ಲಿ ಶ್ರೇಷ್ಟವಾದ ಭಾಷೆ ಎಂದರೆ ಕನ್ನಡ, ಇದಕ್ಕೆ ತನ್ನದೇ ಆದ ಇತಿಹಾಸ ಇದೆ. ಇದನ್ನು ಮೀರಿಸುವ ಭಾಷೆ ಯಾವುದೂ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರುಣ್ ಕುಮಾರ್ ಎಂ.ವೈ.ಪಾಟೀಲ್, ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು. ರೈತ ಹೋರಾಟಗಾರ ದಯಾನಂದ ಪಾಟೀಲ್, ಡಾ. ಮಲ್ಲಿಕಾರ್ಜುನ್ ಯಡ್ರಾಮಿ ರಚಿಸಿದ 'ಅಂತರಂಗದ ಪ್ರಣತಿ' ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಕಸಾಪ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮಾತನಾಡಿ, ಕಸಾಪ ಅಧ್ಯಕ್ಷರಾಗಿ ಬಿ.ಎಚ್ ನಿರಗುಡಿ ಗೆದ್ದು ಬಂದರೆ, ಮುಂದಿನ ದಿನಗಳಲ್ಲಿ 'ಕೃಷಿ ಸಾಹಿತ್ಯ ಸಮ್ಮೇಳನ' ಆಯೋಜಿಸುವರು ಎಂದು ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಅವರು ಪ್ರಶಸ್ತಿ ವಿತರಿಸಿದರು. ಪ್ರತಿಷ್ಠಾನದ ಅಧ್ಯಕ್ಷ, ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿ ಕಾರ್ಯಕ್ರಮದಲ್ಲಿ 12 ಮಂದಿ ಕವಿಗಳು ನಾಡು, ನುಡಿ, ಇತರ ವಿಷಯಗಳ ಬಗ್ಗೆ ತಮ್ಮ ಕವನಗಳನ್ನು ವಾಚಿಸುವ ಮೂಲಕ ಗಮನ ಸೆಳೆದರು.
ಕಾಂಗ್ರೆಸ್ ಮುಖಂಡರಾದ ಕಿಶೋರ್ ಗಾಯಕ್ವಾಡ್, ಡಾ.ಎಸ್.ಎಸ್.ಗುಬ್ಬಿ, ಮಲ್ಲಿಕಾರ್ಜುನ್ ಯಡ್ರಾಮಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಣ್ಣಾರಾಯ ಶೆಳ್ಳಗಿ, ನಾಗಪ್ಪ ಗೋಗಿ, ಅಪ್ಪಾರಾವ್ ಅಕ್ಕೋಣಿ, ಸೂರ್ಯಕಾಂತ್ ಪೂಜಾರಿ, ಶಿವಾನಂದ ಮಠಪತಿ, ಸಂದೀಪ್ ಮಾಳಗಿ, ಶಿವಾನಂದ ಖಜೂರಿ, ಜಿ.ಎಸ್.ಮಾಲಿ ಪಾಟೀಲ್, ಅಪ್ಪಾಸಾಬ ತೀರ್ಥೆ, ಚಾಮರಾಜ ದೊಡ್ಡಮನಿ, ಪರ್ವೀನ್ ಸುಲ್ತಾನಾ, ಸುನೀಲ್ ಮಾನ್ಪಡೆ, ದಸ್ತಗೀರ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







