ಕ್ಯಾನ್ಸರ್ ಬಗ್ಗೆ ಭಯ ಬೇಡ ಜಾಗೃತರಾಗಿರಿ: ಡಾ. ಶಾಂತಲಿಂಗ ನಿಗ್ಗುಡಗಿ

ಕಲಬುರಗಿ: ಬದಲಾದ ಜೀವನಶೈಲಿ, ಅತಿಯಾದ ಧೂಮಪಾನ, ಬಳಕೆಯಾಗುತ್ತಿರುವ ಆಹಾರ ಸಂರಕ್ಷಕಗಳು, ರಾಸಾಯನಿಕ ಪದಾರ್ಥಗಳು, ಕೃಷಿಯಲ್ಲಿನ ಕೀಟನಾಶಕಗಳು, ಇವು ಮನುಷ್ಯನಲ್ಲಿ ಕ್ಯಾನ್ಸರ್ನಂತಹ ಮಾರಣಾಂತಿಕ ಆರೋಗ್ಯ ಸಮಸ್ಯೆಯನ್ನು ತಂದೂಡಲು ಕಾರಣವಾಗುತ್ತವೆ ಎಂದು ಎಚ್.ಸಿ.ಜಿ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ತಜ್ಞ ಡಾ.ಶಾಂತಲಿಂಗ ನಿಗ್ಗುಡಗಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ 'ವಿಶ್ವ ಕ್ಯಾನ್ಸರ್ ದಿನಾಚರಣೆ' ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗದ ನಿರ್ವಹಣೆ, ರೋಗದ ಲಕ್ಷಣಗಳು ಹಾಗೂ ಚಿಕಿತ್ಸೆ ವಿಷಯದ ಕುರಿತು ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರಲ್ಲಿ ಹೆಚ್ಚು ಸ್ತನ ಕ್ಯಾನ್ಸರ್ ಹಾಗೂ ಪುರುಷರಲ್ಲಿ ಬಾಯಿ, ಗಂಟಲು, ಕತ್ತಿನ ಕ್ಯಾನ್ಸರ್ ದ ರೋಗಿಗಳು ಹೆಚ್ಚಾಗಿ ಕಾಣಿಸುತ್ತಿವೆ ಎಂದರು.
ಅದರಲ್ಲೂ ಮಹಿಳೆಯರಿಗೆ ಕಂಡುಬರುವ ಸ್ತನ ಕ್ಯಾನ್ಸರ್ ಪ್ರಪಂಚದಾದ್ಯಂತ 2ನೇ ಅತಿ ದೊಡ್ಡ ಮಾರಕ ಕಾಯಿಲೆಯಾಗಿ ವ್ಯಾಪಿಸಿದೆ, ಈ ಒಂದು ಜೀವಕ್ಕೆ ಮಾರಕವಾಗಿರುವ ಕಾಯಿಲೆ ಬರುವ ಮುಂಚೆ ಕೆಲವೊಂದು ಸೂಚನೆಗಳು ಸಿಗುತ್ತವೆ. ಮಹಿಳೆಯರು ಆ ಸಂದರ್ಭದಲ್ಲಿ ವೈದ್ಯರನ್ನು ಭೇಟಿ ಮಾಡಿ, ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಸ್ತನ ಕ್ಯಾನ್ಸರ್ ಕಂಡು ಬರುವ ಮಹಿಳೆಯರಲ್ಲಿ ಪ್ರಪ್ರಥಮವಾಗಿ ಕಂಡುಬರುವ ಲಕ್ಷಣ ಸ್ತನಗಳು ಊದಿಕೊಳ್ಳುವುದು, ಕೆಂಪು ಬಣ್ಣಕ್ಕೆ ತಿರುಗುವುದು, ನಿಪ್ಪಲ್ ಅಥವಾ ಅದರ ಸುತ್ತ ಮುತ್ತ ಚರ್ಮ ಸಿಪ್ಪೆ ಸುಲಿದುಕೊಳ್ಳುವುದು, ಸ್ತನದ ಯಾವುದಾದರೂ ಕಡೆ ಇದ್ದಕ್ಕಿದ್ದಂತೆ ಚರ್ಮ ಗಟ್ಟಿಯಾದಂತೆ ಕಾಣುವುದು, ಚರ್ಮದ ಕೆರೆತ ಕಂಡುಬರುವುದು ಇತ್ಯಾದಿ ಸಮಸ್ಯೆಗಳು ಇರುತ್ತವೆ ಎಂದು ಹೇಳಿದರು.
ಕ್ಯಾನ್ಸರ್ ನಮ್ಮ ದೇಹದಲ್ಲಿ ಹರಡುವ ಗುಣವನ್ನು ಹೊಂದಿರುತ್ತದೆ. ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಕೂಡ ಇದೇ ರೀತಿ ಮಾಡುತ್ತದೆ. ದೇಹದ ಯಾವ ಭಾಗದ ಸ್ತನ ಕ್ಯಾನ್ಸರ್ ಸಮಸ್ಯೆಗೆ ಒಳಗಾಗಿರುತ್ತದೆ, ಅದೇ ಭಾಗದಲ್ಲಿ ಅದು ಕಂಕುಳಿನ ವರೆಗೂ ಹರಡಿ ಅಲ್ಲಿರುವ ದುಗ್ಧರಸ ಗ್ರಂಥಿಗಳು ಊದಿ ಕೊಳ್ಳುವ ಹಾಗೆ ಮಾಡುತ್ತದೆ ಎಂದರು.
ಔಷಧಿ ವಿಭಾಗ ಮುಖ್ಯಸ್ಥರಾದ ಡಾ. ಸುರೇಶ್ ಹರಸೂರ್ ಮಾತನಾಡಿ, ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಣೆ ಮಾಡಲಾಗುತ್ತದೆ. ಮನುಷ್ಯನಿಗೆ ಶತ್ರುವಿನ ರೀತಿ ಕಾಡುವ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಸರಿಯಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಆನಂದ ಗಾರಂಪಳ್ಳಿ ಸೇರಿದಂತೆ ಅನೇಕ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಹಾಜರಿದ್ದರು.