ಆಳಂದದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ವ್ಯಸನಮುಕ್ತ ಓಟ ಅಭಿಯಾನಕ್ಕೆ ಚಾಲನೆ

ಆಳಂದ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ, ಸಮಾನತೆ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಸಂದೇಶವನ್ನು ಹರಡುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತ ಸಲ್ಮಾನ್ ಖಾನ್ ನಗರ್ ವಿಶಿಷ್ಟ ಓಟದ ಅಭಿಯಾನಕ್ಕೆ ಚಾಲನೆ ನೀಡಿದರು.
ಆಳಂದ ಪಟ್ಟಣದಿಂದ ತಡಕಲ್ ಗ್ರಾಮವರೆಗೆ ಆರಂಭವಾದ ಈ ಓಟವು ಒಟ್ಟು 150 ಗ್ರಾಮಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಈ ಅಭಿಯಾನದ ಮೂಲಕ ಯುವಜನತೆಗೆ ವ್ಯಸನಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಸಮಾನತೆಯ ಮೌಲ್ಯಗಳನ್ನು ಬಿತ್ತುವ ಉದ್ದೇಶ ಹೊಂದಿದ್ದಾರೆ.
ಓಟದ ಮೂಲಕ ಹಂತ ಹಂತವಾಗಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಓಟಕ್ಕೆ ಚಾಲನೆ ನೀಡಿದ ಸುಜಾತಾ ಪಿ.ಎನ್. ಶಹಾ ಮಾತನಾಡಿ, ಸಮಾಜದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಯುವಕರು ಇಂತಹ ಅಭಿಯಾನಗಳಲ್ಲಿ ಭಾಗವಹಿಸುವುದು ಪ್ರಶಂಸನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದಾರ್ಥ್, ಪ್ರಮೋದ್ ಪಾಂಚಾಳ್, ಪಂಡಿತ್ ಸಲಗರ, ಕಿಣಿಬಾಸ್, ಇರ್ಫಾನ್ ಸಾಬ್ ಸೇರಿದಂತೆ ಹಲವರು ಭಾಗವಹಿಸಿ ಬೆಂಬಲ ಸೂಚಿಸಿದರು.
ಸಲ್ಮಾನ್ ಖಾನ್ ನಗರ್ ಅವರ ಈ ಪ್ರಯತ್ನವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡುವ ನಿರೀಕ್ಷೆ ವ್ಯಕ್ತವಾಗಿದ್ದು, ವ್ಯಸನಮುಕ್ತ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಇಂತಹ ಅಭಿಯಾನಗಳು ಪ್ರೇರಣೆಯಾಗುತ್ತವೆ ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.






