ಕಲಬುರಗಿಯ ಎಲ್ಲೆಡೆ ಶಾಂತಿ- ಸಹಬಾಳ್ವೆಯ 'ಈದುಲ್ ಫಿತ್ರ್' ಆಚರಣೆ

ಕಲಬುರಗಿ: ಮುಸ್ಲಿಂ ಭಾಂದವರು ಶಾಂತಿ ಸಹಬಾಳ್ವೆಯ ಸಂಕೇತವಾದ 'ಈದುಲ್ ಫಿತ್ರ್' (ರಂಝಾನ್) ಹಬ್ಬವನ್ನು ಶನಿವಾರ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.
ತಿಂಗಳ ಪೂರ್ತಿ ಉಪವಾಸ ವೃತ ಆಚರಿಸಿದ ಮುಸಲ್ಮಾನರು ಶನಿವಾರ ಸಮೀಪದ ಈದ್ಗಾ ಮೈದಾನಗಳಲ್ಲಿ ಸೇರಿಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಶ್ವಶಾಂತಿ, ಭಾತೃತ್ವ, ಸಹಬಾಳ್ವೆ ಹಾಗೂ ಯುದ್ಧ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ, ಮಾನವೀಯತೆ ಕೊಲ್ಲುವ ಯುದ್ಧವನ್ನು ಕೊನೆಗಾಣಿಸಬೇಕು ಎಂದು ವಿಶೇಷವಾಗಿ ಪ್ರಾರ್ಥಿಸಿದರು.
ನಮಾಝ್ ನೆರವೇರಿಸಿದ ಬಳಿಕ ಬಡವ-ನಿರ್ಗತಿಕರಿಗೆ ದಿನಸಿ ವಿತರಣೆ ಮಾಡಿ ಗಮನ ಸೆಳೆದರೆ, ಝಕಾತ್ (ದಾನ) ಮಾಡಿದರು. ಪುರುಷರು, ಮಹಿಳೆಯರು ವಿಶೇಷ ಉಡುಗೆಗಳಲ್ಲಿ ಗಮನ ಸೆಳೆದರು. ಮಕ್ಕಳು ಸಹ ಆಕರ್ಷಕ ಉಡುಗೆ ತೊಡುಗೆಗಳಿಂದ ಆಕರ್ಷಿಸಿದರು.
ಪ್ರಾರ್ಥನೆ ಬಳಿಕ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸೇಡಂನಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಆಳಂದದಲ್ಲಿ ಶಾಸಕ ಬಿ.ಆರ್ ಪಾಟೀಲ್, ಜೇವರ್ಗಿಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್, ಅಫಜಲಪುರದಲ್ಲಿ ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಕಲಬುರಗಿ ನಗರದಲ್ಲಿ ಕಾಂಗ್ರೆಸ್ ಮುಖಂಡ ಫರಾಜ್ ಉಲ್ ಇಸ್ಲಾಂ ಅವರು ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ತಿಳಿಸಿದರು. ಬಳಿಕ ಶಿರ್ ಕುರ್ಮಾ, ಖಾದ್ಯಗಳು, ಸಿಹಿ ತಿನಿಸುಗಳು, ನಾನಾ ರೀತಿಯ ವಿಶೇಷ ಮಾಂಸಾಹಾರ ಪದಾರ್ಥಗಳು ಸವಿದು ಸಂಭ್ರಮದಿಂದ ಹಬ್ಬ ಆಚರಿಸಿದರು.
ಕಲಬುರಗಿ ನಗರದಲ್ಲಿ ಆಳಂದ ಚೆಕ್ ಪೋಸ್ಟ್ ಸಮೀಪದ ಈದ್ಗಾ, ರಾಜಾಪುರ ಈದ್ಗಾ ಮೈದಾನ, ದರ್ಗಾ ಮೈದಾನ, ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ, ವೈದ್ಯ ಡಾ.ಫಾರುಕ್ ಮಣೂರ, ಡಾ. ಅಜಗರ್ ಚುಲಬುಲ್, ಶಕೀಲ್ ಸರಡಗಿ, ಮೌಲಾನಾ ವಿಖಾರ್ ಆಸರ್ಫಿ, ಸೇರಿದಂತೆ ಹಲವು ಮುಖಂಡರು ಇದ್ದರು.






