ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಶಿವ ಅಷ್ಟಗಿ

ಕಲಬುರಗಿ: ಜೀವ ಸಂಕುಲದ ಉಳಿವಿಗೆ ಪರಿಸರವೇ ಮೂಲಾಧಾರವಾಗಿದ್ದು, ಗಿಡ-ಮರಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ಪರಿಸರವಾದಿ ಶಿವ ಅಷ್ಟಗಿ ಹೇಳಿದರು.
ನಗರದ ಕುಸನೂರು ರಸ್ತೆಯ ಉಜ್ವಲ ಹೌಸಿಂಗ್ ಸೊಸೈಟಿ ಬಡಾವಣೆಯ ಲುಂಬಿನಿ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪರಿಸರ ಸಂರಕ್ಷಣೆಯ ಕುರಿತು ನಿರಂತರ ಜಾಗೃತಿ ಮೂಡಿಸುವ ಚಳವಳಿಯಾಗಬೇಕು ಎಂದು ಅವರು ಹೇಳಿದರು. ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ, ಅರಣ್ಯನಾಶ ಮತ್ತು ಮಾಲಿನ್ಯದಂತಹ ಗಂಭೀರ ಸವಾಲುಗಳನ್ನು ಎದುರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಅಗತ್ಯವಿದೆ. ಸಸಿ ನೆಡುವುದಷ್ಟೇ ಅಲ್ಲ, ಅವುಗಳನ್ನು ಮರಗಳಾಗಿ ಬೆಳೆಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಬಡಾವಣೆಗಳು ಹಾಗೂ ನಗರ ಪ್ರದೇಶಗಳಲ್ಲಿ ಸಸಿ ನೆಡುವ ಜೊತೆಗೆ ಅವುಗಳಿಗೆ ನಿರಂತರವಾಗಿ ನೀರುಣಿಸಿ ಪೋಷಿಸುವ ಕಾರ್ಯವನ್ನು ನಾಗರಿಕರು ತಮ್ಮ ನಿತ್ಯದ ಜವಾಬ್ದಾರಿಯೆಂದು ಪರಿಗಣಿಸಬೇಕು ಎಂದು ಹೇಳಿದರು. ಪದ್ಮಭೂಷಣ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ಪರಿಸರ ಪ್ರೇಮ ಮತ್ತು ಸೇವಾ ಮನೋಭಾವವನ್ನು ಎಲ್ಲರೂ ಆದರ್ಶವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಮಾತನಾಡಿ, ಪರಿಸರ ಹಿತವೇ ಮಾನವ ಹಿತವಾಗಿದ್ದು, ಶಿಕ್ಷಣದಷ್ಟೇ ಪರಿಸರ ಸಂರಕ್ಷಣೆಯೂ ಮಹತ್ವದ್ದಾಗಿದೆ ಎಂದರು. ನಗರೀಕರಣದ ವೇಗದ ನಡುವೆ ಪರಿಸರ ಸಂಪತ್ತು ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಸ್ತೆ ಬದಿಗಳಲ್ಲಿ ನೆಡುವ ಸಸಿಗಳನ್ನು ದನಕರುಗಳ ಹಾನಿಯಿಂದ ರಕ್ಷಿಸಲು ಸೂಕ್ತ ತಂತಿ ಬೇಲಿ ನಿರ್ಮಿಸಿ ಅವುಗಳ ಸಂರಕ್ಷಣೆಗೆ ನಾಗರಿಕರು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಹಾಗೂ ವೈದ್ಯಾಧಿಕಾರಿ ಡಾ.ರಾಜೇಂದ್ರ ಭಾಲ್ಕೆ, ಡಾ. ನಾಗೇಂದ್ರ ನಂದಾ, ಪರಿಸರವಾದಿ ಸತೀಶ, ಡಾ. ಕೆ.ಎಂ. ಕುಮಾರಸ್ವಾಮಿ, ಶಿವಕುಮಾರ ಮೋತಿ ಸೇರಿದಂತೆ ಹಲವು ಗಣ್ಯರು, ಪರಿಸರ ಪ್ರೇಮಿಗಳು ಮತ್ತು ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.






