ದಲಿತರು ಸಂಪೂರ್ಣ ಅಕ್ಷರಸ್ಥರಾದರೆ ಶೋಷಣೆ ನಿರ್ಮೂಲನೆ ಸಾಧ್ಯ : ಶಾಸಕ ಎಂ.ವೈ ಪಾಟೀಲ್

ಕಲಬುರಗಿ : ದಲಿತರು ಸಂಪೂರ್ಣವಾಗಿ ಅಕ್ಷರಸ್ಥರು ಮತ್ತು ವಿದ್ಯಾವಂತರಾದರೆ ಮಾತ್ರ ಈ ದೇಶದಲ್ಲಿ ದೌರ್ಜನ್ಯಗಳು ಮತ್ತು ಶೋಷಣೆ ನಿಲ್ಲಲು ಸಾಧ್ಯವಾಗುತ್ತದೆ ಎಂದು ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಅಭಿಪ್ರಾಯಪಟ್ಟರು.
ಅಫಜಲಪುರ ಪಟ್ಟಣದಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವವನ್ನು ಉದ್ಘಾಟಿಸಿ, ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರರು ಈ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ. ಇವುಗಳಿಂದ ಇಡೀ ದೇಶವು ವಿಮೋಚನೆ ಹೊಂದಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಕ್ಷದ ಮುಖಂಡರು ಆದ ನಿತಿನ್ ಗುತ್ತೇದಾರ್ ಮಾತನಾಡಿ, ಈ ದೇಶದಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು ಪಾಲಿಸಿ ನಿಜವಾದ ಪ್ರಜೆಗಳಾಗಿ ಮತ್ತು ನಿಜವಾದ ದೇಶಭಕ್ತರಾಗಿ ಹೊರಹೊಮ್ಮುವಂತೆ ಯುವಜನತೆಗೆ ಕರೆ ನೀಡಿದರು.
ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು, ಆಲಮೇಲ್ ಪಟ್ಟಣದ ಮಲ್ಲಿಬೋಮ್ಮ ಶ್ರೀಗಳು, ಡಾ.ಅನಿಲ್ ತೆಂಗಳಿ, ಮಹಾ ನಾಯಕ ಧಾರವಾಹಿಯ ಬಾಲ ಅಂಬೇಡ್ಕರ್ ಪಾತ್ರಧಾರಿ ಆಯುಧ ಭಾನುಶಾಲಿ, ಪ್ರಭಾವತಿ ಮೈತ್ರಿ ಮತ್ತು ವಿಜಯಕುಮಾರ್ ಸಾಲಿಮನಿ ಮತ್ತು ಇತರರು ಮಾತನಾಡಿದರು.
ಆರಂಭದಲ್ಲಿ ರಾಜು ಅರೆಕರ್ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಗೌತಮ ಸಕ್ಕರೆಗೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜುಕುಮಾರ ದಾಸರ್, ಮತಿನ್ ಅಹ್ಮದ್ ಪಟೇಲ್, ಪಪ್ಪು ಪಟೇಲ್, ಅರವಿಂದ ದೊಡ್ಡಮನೆ, ಅರವಿಂದ ಗುತ್ತೇದಾರ್, ಶಂಕು ಮ್ಯಾಕೆರಿ, ಸಿದ್ದಾರ್ಥ ಬಸರಿಗಿಡದ, ಪ್ರಕಾಶ ಜಮಾದಾರ್, ರವಿ ಗೌರ, ಭೀಮರಾಯ ಗೌರ, ಸಂಜೀವ ಬಗಲಿ, ಶ್ರೀಮಂತ ಬಿರಾದಾರ, ಅಂಬೇಡ್ಕರ್ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಕುಮಾರ್ ಕೊಳಗೇರಿ, ಅಶೋಕ ಗುಡ್ಡಡಗಿ ಮತ್ತು ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭೀಮ ಗಾಯನ ಮತ್ತು ಭರತನಾಟ್ಯದ ನೃತ್ಯವನ್ನು ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರು.







