ಚಿಂಚೋಳಿಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ಚಿಂಚೋಳಿ: ಒಂದು ತಿಂಗಳ ಕಾಲ ಶ್ರದ್ಧಾಭಕ್ತಿ ಹಾಗೂ ಕಠಿಣ ಉಪವಾಸ ವೃತವನ್ನು ಪೂರೈಸಿದ ಮುಸ್ಲಿಂ ಬಾಂಧವರು ಇಂದು ಸಡಗರ-ಸಂಭ್ರಮದಿಂದ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು. ತಾಲೂಕಿನ ದಸ್ತಾಪುರ, ಸುಲೇಪೇಟ, ಚಿಮನಚೋಡ್, ಚಂದಾಪುರ ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮಗಳಲ್ಲಿ ಬೆಳ್ಳಂಬೆಳಗ್ಗೆ ಹೊಸ ಬಟ್ಟೆ ಧರಿಸಿ, ಸುಗಂಧ ದ್ರವ್ಯಗಳನ್ನು ಹಚ್ಚಿಕೊಂಡು ಮಸೀದಿ ಹಾಗೂ ಈದ್ಗಾ ಮೈದಾನಗಳತ್ತ ಸಾಗಿದ ಸಹಸ್ರಾರು ಬಾಂಧವರು, ಸಾಮೂಹಿಕವಾಗಿ ಈದ್ ನಮಾಜ್ ಮಾಡಿದರು.
ನಮಾಝ್ ಮುಗಿದ ನಂತರ ಒಬ್ಬರಿಗೊಬ್ಬರು ಅಪ್ಪಿಕೊಂಡು 'ಈದ್ ಮುಬಾರಕ್' ಎಂದು ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯಗಳು ಮನಮೋಹಕವಾಗಿದ್ದವು. ಬಡವರಿಗೆ ದಾನ ಧರ್ಮಗಳನ್ನು ಮಾಡುವ ಮೂಲಕ ಹಸಿವಿಲ್ಲದ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಈ ಬಾರಿಯ ಹಬ್ಬದ ವಿಶೇಷವಾಗಿತ್ತು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಅವರು ಶುಭಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಮ್.ಬಾರಿ, ಅಬ್ದುಲ್ ಬಾಸಿದ್, ಅನ್ವರ್ ಖತಿಬ್, ಅನಿಲ್ ಜಮಾದಾರ್, ಲಕ್ಷ್ಮಣ್ ಅವುಂಟಿ, ಬಾಬುರಾವ ಪಾಟೀಲ್, ಶರಣು ಪಾಟೀಲ್, ಶೈಲೇಶ್ ಬೆಲದಾಳೆ, ನಾಗೇಶ್ ಗುಣಾಜಿ, ಅಜಿತ್ ಪಾಟೀಲ್, ಸಂತೋಷ್ ಗುತೆದಾರ, ಸಂತೋಷ, ತುಕಾರಾಮ ಪವಾರ, ರಾಮ್ಶೆಟ್ಟಿ ಪವಾರ, ಅಯೂಬ್ ಖಾನ್, ಮೆಹಮೂದ ಅಲಿ, ಹಸನ ಹಾಶ್ಮಿ, ಆದಿಲ್ ಖಾಜಿ, ಮಖಬುಲ್ ಖಾನ್ ಸೇರಿದಂತೆ ಇತರರು ಇದ್ದರು.





