ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ಸ್ಪಂದನೆ| ಯುವಕರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು: ಎಂ.ವೈ. ಪಾಟೀಲ್

ಅಫಜಲಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ವಿಕಾಸ ವೇದಿಕೆ ವತಿಯಿಂದ ರವಿವಾರ ರಾಜ್ಯಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದರು.
ಶಾಸಕ ಎಂ.ವೈ. ಪಾಟೀಲ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಯುಗವು ಸ್ಪರ್ಧಾತ್ಮಕ ಯುಗವಾಗಿದ್ದು, ಜೀವನದಲ್ಲಿ ಯಶಸ್ಸು ಸಾಧಿಸಲು ಸ್ಪರ್ಧಾತ್ಮಕ ಮನೋಭಾವ ಹಾಗೂ ನಿರಂತರ ಶ್ರಮ ಅಗತ್ಯ ಎಂದರು.
"ಭಾರತವು ಯುವಕರ ದೇಶವಾಗಿದ್ದು, ದೇಶದ ಶೇ.60ರಷ್ಟು ಜನಸಂಖ್ಯೆ ಯುವಕರದ್ದಾಗಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಯುವಕರು ಮೊಬೈಲ್ಗೆ ಹೆಚ್ಚು ಒಲವು ತೋರಿಸುತ್ತಿದ್ದು, ಅದರ ಉತ್ತಮ ಹಾಗೂ ದುಷ್ಪರಿಣಾಮಗಳೆರಡನ್ನೂ ಅರಿತು ಬಳಸಬೇಕು. ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡರೆ ಯಾವುದೇ ಕಠಿಣ ಸವಾಲನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ. ನಿಮ್ಮ ತಂದೆ-ತಾಯಿ ಹಾಗೂ ಶಿಕ್ಷಣ ನೀಡಿದ ಗುರುಗಳ ಹೆಸರನ್ನು ತರುವಂತಹ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದ್ದು, ಶಾಲೆ-ಕಾಲೇಜುಗಳ ಗ್ರಂಥಾಲಯಗಳಲ್ಲಿರುವ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಜೆ.ಎಂ. ಕೊರಬು ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್, ಛತ್ರಪತಿ ಸಾಹು ಮಹಾರಾಜ ಹಾಗೂ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಸಮಾನತೆಯ ವಿಚಾರಧಾರೆಗಳು ಸಂಪೂರ್ಣವಾಗಿ ಜಾರಿಯಾದಾಗ ಮಾತ್ರ ಎಲ್ಲರಿಗೂ ಸಮಾನ ಹಕ್ಕುಗಳು ದೊರೆಯಲಿವೆ ಎಂದರು.
ಈ ಭಾಗದಲ್ಲಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಿರುವುದು ಅರ್ಥಪೂರ್ಣ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ಸಿದ್ಧತೆಯ ಬಗ್ಗೆ ಅರಿವು ಮೂಡಿಸುತ್ತವೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 51,000, ದ್ವಿತೀಯ ಬಹುಮಾನ 25,000 ಹಾಗೂ ತೃತೀಯ ಬಹುಮಾನ 15,000 ನಿಗದಿಪಡಿಸಲಾಗಿತ್ತು. ಪರೀಕ್ಷೆಯ ಫಲಿತಾಂಶವನ್ನು ಅದೇ ದಿನ ಪ್ರಕಟಿಸಿ ಗಣ್ಯರ ಸಮ್ಮುಖದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ ಮಾತನಾಡಿ ಯುವಕರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಿದ್ದತೆ ಪಡೆಯಬೇಕು ಎಂದರು.
ಬೆಂಗಳೂರಿನ ಇನ್ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ ವಿಶೇಷ ಉಪನ್ಯಾಸ ನೀಡಿದರು.
ಈ ಸಂಧರ್ಭದಲ್ಲಿ ಶಂಕರ ಮ್ಯಾಕೇರಿ, ಜೆಡಿಎಸ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸಿಂಗೆ, ನಾಮದೇವ ಕಡಕೋಳ, ವಕೀಲರ ಸಂಘದ ಅಧ್ಯಕ್ಷ ಅರ್ಜುನ ಕೆರೂರ, ವಕೀಲ ಕೆ.ಜಿ. ಪೂಜಾರಿ, ಭೀಮರಾಯ ಗೌರ, ಡಾ.ಸಂಗಣ್ಣ ಸಿಂಗೆ, ಡಾ.ಸಂತೋಷ ಹುಗ್ಗಿ, ರಾಜಕುಮಾರ ಬಳೂರ್ಗಿ, ಡಾ.ಶಿವಶರಣಪ್ಪ ಮೊತಕಪಳ್ಳಿ, ಗುರು ಪೂಜಾರಿ, ಮಹಾಂತ ಬಳೂಂಡಗಿ ಮುತ್ತು ಕುರಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






