ಕಲಬುರಗಿಯ ಎಸ್ಬಿ ಕೆರೆ ಸಮಗ್ರ ಅಭಿವೃದ್ಧಿಗೆ ಸರಕಾರದ ಯೋಜನೆ
ಪರಿಸರ ಸ್ನೇಹಿ, ಜನಸ್ನೇಹಿ ಸಾರ್ವಜನಿಕ ತಾಣವಾಗಿ ಎಸ್ಬಿ ಕೆರೆ ರೂಪಾಂತರ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ನಗರದ ಐತಿಹಾಸಿಕ ಎಸ್ಬಿ ಕೆರೆಯನ್ನು ಅತ್ಯಾಧುನಿಕ, ಪರಿಸರ ಸ್ನೇಹಿ ಹಾಗೂ ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಸಮಗ್ರ ಸಾರ್ವಜನಿಕ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಗರದ ಅಭಿವೃದ್ಧಿಯಲ್ಲಿ ಗುಣಮಟ್ಟದ ಸಾರ್ವಜನಿಕ ಸ್ಥಳಗಳ ನಿರ್ಮಾಣಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಎಸ್ಬಿ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ನಾಗರಿಕರು ವಾಯುವಿಹಾರ, ಮನರಂಜನೆ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ಹೇಳಿದರು.
ಯೋಜನೆಯಡಿ ಕೆರೆಯ ದಡವನ್ನು ಸುಂದರವಾಗಿ ಮರುರೂಪಿಸುವುದರ ಜೊತೆಗೆ, ಕೆರೆಯ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಹಸಿರು ವಾತಾವರಣದೊಂದಿಗೆ ನಡಿಗೆ ಮಾರ್ಗ, ಆಸನ ವ್ಯವಸ್ಥೆ, ಮಕ್ಕಳ ಆಟದ ವಲಯ, ಮನರಂಜನಾ ಸ್ಥಳಗಳು ಹಾಗೂ ವಿವಿಧ ಸಾರ್ವಜನಿಕ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ನಗರಾಭಿವೃದ್ಧಿ ಎಂದರೆ ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಲ್ಲ. ಜನರು ನೆಮ್ಮದಿಯಿಂದ ಸಮಯ ಕಳೆಯಲು, ಕುಟುಂಬದೊಂದಿಗೆ ಬೆರೆಯಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಉತ್ತಮ ಸಾರ್ವಜನಿಕ ತಾಣಗಳ ನಿರ್ಮಾಣವೂ ಅಗತ್ಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಎಸ್ಬಿ ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಬಳಕೆಯ ನಡುವೆ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ. ಕೆರೆಯ ನೈಸರ್ಗಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಯೋಜನೆ ರೂಪಿಸಲಾಗಿದ್ದು, ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ಬಳಸಿಕೊಳ್ಳಬಹುದಾದ ಜನಸ್ನೇಹಿ ತಾಣವಾಗಿ ಎಸ್ಬಿ ಕೆರೆಯನ್ನು ರೂಪಿಸಲಾಗುವುದು ಎಂದು ಸಚಿವರು ವಿವರಿಸಿದರು.
ಕಲಬುರಗಿ ನಗರಕ್ಕೆ ಅಗತ್ಯವಿರುವ ಆಧುನಿಕ ಸಾರ್ವಜನಿಕ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಎಸ್ಬಿ ಕೆರೆ ಅಭಿವೃದ್ಧಿ ಯೋಜನೆಯು ನಗರದ ಸೌಂದರ್ಯೀಕರಣದ ಜೊತೆಗೆ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವ ಮಹತ್ವದ ಯೋಜನೆಯಾಗಿದ್ದು, ಭವಿಷ್ಯದಲ್ಲಿ ಕಲಬುರಗಿಯ ಹೊಸ ಹೆಗ್ಗುರುತಾಗಿ ಹೊರಹೊಮ್ಮುವಂತೆ ರೂಪಿಸುವುದು ಸರ್ಕಾರದ ಆಶಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.






