ಹರ್ಷಾನಂದ ಗುತ್ತೇದಾರ ಪಾದಯಾತ್ರೆ ರಾಜಕೀಯ ನಾಟಕ: ಶಾಸಕ ಬಿ.ಆರ್. ಪಾಟೀಲ್

ಕಲಬುರಗಿ : ಆಳಂದ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಹಾಗೂ ಬೆಳೆ ವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ ಹಮ್ಮಿಕೊಂಡಿರುವ ಪಾದಯಾತ್ರೆ ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಡೋಂಗಿ ನಾಟಕ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯವೇ ಬರ ಘೋಷಣೆ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವಾಗಲಿ, ಸ್ಥಳೀಯ ಶಾಸಕರಾಗಲಿ ನೇರ ಪಾತ್ರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ನಿಯಮಗಳು ಹಾಗೂ ವೈಫಲ್ಯದಿಂದಲೇ ಆಳಂದ ತಾಲ್ಲೂಕು ಬರ ಪಟ್ಟಿಯಿಂದ ಹೊರಗುಳಿದಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಮಾತ್ರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದರು.
ಕೇಂದ್ರದ ವಿರುದ್ಧವೂ ಪಾಟೀಲ್ ವಾಗ್ದಾಳಿ
ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು ಬರ ಪರಿಸ್ಥಿತಿ ಎದುರಾಗಿ ಎಂಟು ತಿಂಗಳು ಕಳೆದರೂ ಕೇಂದ್ರದ ಅಧ್ಯಯನ ತಂಡವನ್ನು ಕಳುಹಿಸಿಲ್ಲ ಎಂದು ಟೀಕಿಸಿದರು.
ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿಯೂ ಸ್ಥಳೀಯ ಬಿಜೆಪಿ ಸಂಸದರು ಈ ಕುರಿತು ಧ್ವನಿ ಎತ್ತಿಲ್ಲ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿಯೂ ವಿಪಕ್ಷಗಳು ವಿಷಯ ಚರ್ಚೆಗೆ ಅವಕಾಶ ನೀಡದೆ ಕಾಲಹರಣ ಮಾಡಿವೆ ಎಂದು ಆರೋಪಿಸಿದರು.
ಹೀಗಾಗಿ ಬಿಜೆಪಿ ನಾಯಕರು ಇದೀಗ ನಡೆಸುತ್ತಿರುವ ಪಾದಯಾತ್ರೆ ವಾಸ್ತವವಾಗಿ ಅವರದೇ ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ನಡೆಸುತ್ತಿರುವ ಹೋರಾಟವಾಗಿದೆ ಎಂದು ವ್ಯಂಗ್ಯವಾಡಿದರು.
ಆಳಂದ ಕ್ಷೇತ್ರದಲ್ಲಿ ಬೆಳೆ ವಿಮೆ ಪರಿಹಾರ ನೀಡುವ ವಿಚಾರದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರೊಂದಿಗೆ ಬಹಿರಂಗ ಚರ್ಚೆಗೆ ಅಹ್ವಾನಿಸಿದ ಅವರು ಬಿಜೆಪಿ ನಾಯಕರ ಆಡಳಿತಾವಧಿಯಲ್ಲಿ ನಡೆದಿರುವ ವೈಫಲ್ಯಗಳನ್ನು ಅಂಕಿ-ಅಂಶಗಳ ಸಮೇತ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವುದಾಗಿ ಎಚ್ಚರಿಸಿದರು.
ಪ್ರಸಕ್ತ 2025-26ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಬೆಳೆ ವಿಮೆ ಪರಿಹಾರ ಆಳಂದ ಕ್ಷೇತ್ರಕ್ಕೆ ಮಂಜೂರಾಗಿದೆ. 77,979 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, 74,461 ಫಲಾನುಭವಿ ರೈತರಿಗೆ ಒಟ್ಟು 182.60 ಕೋಟಿ ಪರಿಹಾರ ಬಿಡುಗಡೆಯಾಗಿದೆ ಎಂದು ಅಂಕಿ-ಅಂಶ ನೀಡಿದರು.
ಜಿಲ್ಲೆಯ ಇತರ ಯಾವುದೇ ತಾಲ್ಲೂಕಿಗೆ ದೊರೆಯದಷ್ಟು ಬೆಳೆ ವಿಮೆ ಪರಿಹಾರವನ್ನು ಆಳಂದ ತಾಲ್ಲೂಕಿಗೆ ತರಲಾಗಿದೆ ಎಂದು ಅವರು ಹೇಳಿದರು. ಬೆಳೆ ವಿಮೆ ಪರಿಹಾರದಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದಲ್ಲಿ ಸಂಬಂಧಿಸಿದ ರೈತರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸಲಹೆ ನೀಡಿದರು.
ರಾಜಕೀಯ ಕಾರಣಕ್ಕಾಗಿ ರೈತರ ಸಮಸ್ಯೆಗಳನ್ನು ಬಳಸಿಕೊಳ್ಳುವ ಬದಲು ವಾಸ್ತವಾಂಶಗಳ ಆಧಾರದ ಮೇಲೆ ಚರ್ಚೆ ನಡೆಸಬೇಕು ಎಂದು ಹೇಳಿದರು.






