ಆಳಂದ: ಹಲವಡೆ ಬಿರುಗಾಳಿ ಸಹಿತ ಮಳೆ; ಅಪಾರ ಹಾನಿ

ಕಲಬುರಗಿ: ಆಳಂದ ತಾಲೂಕಿನ ಯಳಸಂಗಿ, ಮಾಡಿಯಾಳ ಹಾಗೂ ತಡಕಲ್ ಕೋತನಹಿಪ್ಪರಗಾ ಸೇರಿ ಹಲವಡೆ ಬಿರುಗಾಳಿ ಸಹಿತ ಅಕಾಲಿಕ ಮಳೆಯಿಂದಾಗಿ ಬೆಳೆ ಮತ್ತು ಹಲವು ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ.
ಆಳಂದ ತಾಲ್ಲೂಕಿನ ಕೋತನಹಿಪ್ಪರಗಾ ಗ್ರಾಮದಲ್ಲಿನ ರೇವಣಸಿದ್ಧಯ್ಯಾ ಸ್ವಾಮಿ ಸೇರಿದಂತೆ ಇನ್ನಿತರ ಮನೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಬೀಸಿದ ಬೀರುಗಾಳಿ ಸಹಿತ ಮಳೆಗೆ ಬೆಳೆ, ಜಾನುವಾರುಗಳ ಮೇವು ಹಾನಿಯಾಗಿದೆ ಎಂದು ವರದಿಯಾಗಿದೆ.
ಆಳಂದ ತಾಲೂಕಿನ ಮಾಡಿಯಾಳ ವಲಯದಲ್ಲಿ ರವಿವಾರ ಸಂಜೆ ಸುಮಾರು ಒಂದು ಗಂಟೆ ಗಾಳಿ ಮಳೆ ಸುರಿಯಿತು. ಗಾಳಿ ಮಳೆಯಿಂದಾಗಿ ಬಾಳೆ ಗಿಡಗಳು ನೆಲಕ್ಕುರುಳಿವೆ. ಅಲ್ಲದೆ, ತರಕಾರಿ ಹಣ್ಣಿನ ಬೆಳೆಗಳಿಗೆ ಅಪಾರ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ.
ಬಿರುಗಾಳಿಯಿಂದ ಬಾಳೆ ತೋಟಗಳು ನೆಲಸಮವಾದವು. ಈ ಗಾಳಿ ಮಳೆಯಿಂದ ಮಾಡಿಯಾಳನಲ್ಲಿ ಅಂಬವ್ವ್ಯ ಸಿದ್ಧನಾಥ ಮಾಶಾಳೆ ಅವರ ಎರಡು ಎಕರೆ ಬಾಳೆ ತೋಟ ನಾಶವಾಗಿದೆ. ಹಾನಿಯಾದ ತೋಟಗಾರಿಕೆ ಬೆಳೆಗೆ ಇಲಾಖೆಯ ಸರ್ವೆ ನಡೆಸಿ ಪರಿಹಾರ ಒದಗಿಸಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಒದಗಿಸಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಒತ್ತಾಯಿಸಿದ್ದಾರೆ.





