ಭಾರಿ ಮಳೆ | ಸೇಡಂ ತಾಲೂಕಿನಲ್ಲಿ ಹಲವು ಸೇತುವೆ ಮುಳುಗಡೆ : ಸ್ಥಳಕ್ಕೆ ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಭೇಟಿ

ಕಲಬುರಗಿ: ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೇಡಂ ತಾಲ್ಲೂಕಿನ ಮಳಖೇಡ, ಹಯಾಳ್ಳ ಹಾಗೂ ಸಂಗಾವಿ ಎಂ. ಸಮೀಪದ ಕಾಗಿ ನದಿ ಸೇತುವೆ ಮುಳುಗಡೆಗೊಂಡಿದ್ದು, ಸ್ಥಳಕ್ಕೆ ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸೇಡಂ ತಾಲ್ಲೂಕಿನಲ್ಲಿ ಬರುವ ಕಾಗಿಣಾ ನದಿಗೆ ಒಳಪಡುವ ಸೇತುವೆಗಳು ಮಳೆಗೆ ಮುಳುಗಡೆಯಾಗಿದ್ದು, ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಮನೆಗಳಿಂದ ಹೊರಗಡೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಅವರು, ದನಕರುಗಳು ಸೇತುವೆ ಮುಳುಗಡೆ ಸ್ಥಳಕ್ಕೆ ಬಾರದೇ ಜಾಗ್ರತೆಯಿಂದಿರಬೇಕು. ಮಳೆ ಬರುವ ಮೂನ್ಸೂಚನೆ ಇರುವುದರಿಂದ ಯುವಕರು ಸೇತುವೆ ಬಳಿ ಬಂದು ಸೆಲ್ಫಿ ತೆಗೆಯಬಾರದು ಎಂದು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಾಗಿಣಾ ನದಿ ಸೇತುವೆ ಮುಳುಗಡೆ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ದನ ಕರುಗಳು ಹಾಗೂ ಯುವಕರು ಬರದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು. ಧಾರಾಕಾರ ಬರುವ ಮಳೆಗೆ ಮನೆಗಳು ಕುಸಿಯುವ ಸಂಭವ ಇದಲ್ಲಿ ಜಾಗ್ರತೆ ವಹಿಸಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯತೆ ಬೇಡ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಇದ್ದರು.







