ಅಕ್ರಮ ಗಣಿಗಾರಿಕೆ ಆರೋಪ: ಕೇಂದ್ರ ಮಾಜಿ ಸಚಿವ ಖೂಬಾರಿಗೆ 25 ಕೋಟಿ ರೂ. ದಂಡ ಪಾವತಿಸುವಂತೆ ನೋಟಿಸ್

ಕಲಬುರಗಿ: ಕಾಳಗಿ ತಾಲೂಕಿನ ವಚ್ಚಾ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಕೇಂದ್ರ ಮಾಜಿ ಸಚಿವ ಹಾಗೂ ಬೀದರ್ ನ ಬಿಜೆಪಿ ಮಾಜಿ ಸಂಸದ ಭಗವಂತ್ ಖೂಬಾ ಅವರಿಗೆ 25.30 ಕೋಟಿ ರೂ. ದಂಡ ಪಾವತಿಸುವಂತೆ ಗಣಿಗಾರಿಕೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
2014ರ ಜುಲೈ 19ರಿಂದ 2019ರ ಜುಲೈ 18ರವರೆಗೆ ವಚ್ಚಾ ಗ್ರಾಮದ ಸರ್ವೇ ನಂಬರ್ 24/4ರಲ್ಲಿ ಕೇವಲ 2 ಎಕರೆಗೆ ಮಾತ್ರ ಅನುಮತಿ ಇದ್ದರೂ ಹೆಚ್ಚು ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂಬ ಸಂಜೀವಕುಮಾರ್ ತಿಪ್ಪಣ್ಣ ಜವರ್ಕ ಎಂಬವರು ಭಗವಂತ್ ಖೂಬಾ ವಿರುದ್ಧ ದೂರು ಸಲ್ಲಿಸಿದ್ದರು.
ದೂರಿನ ಆಧಾರದ ಮೇಲೆ ಗಣಿಗಾರಿಕೆ ಇಲಾಖೆ ಮತ್ತು ಕಾಳಗಿ ತಹಶೀಲ್ದಾರರು ಜಂಟಿ ಪರಿಶೀಲನೆ ನಡೆಸಿದಾಗ ಅಕ್ರಮ ಗಣಿಗಾರಿಕೆ ನಡೆದಿರುವುದು ದೃಢಪಟ್ಟಿದೆಯೆನ್ನಲಾಗಿದೆ. ಅಧಿಕಾರಿಗಳ ವರದಿ ಆಧರಿಸಿ 25.30 ಕೋಟಿ ರೂಪಾಯಿಗಳ ದಂಡ ಪಾವತಿಸುವಂತೆ ಖೂಬಾ ಅವರಿಗೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಈ ನೋಟಿಸ್ ವಿರುದ್ದ ಖೂಬಾ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿಬಂದಿದೆ.
Next Story





