ಕಮಲಾಪುರದಲ್ಲಿ ಶೀಘ್ರ ಜೆಎಂಎಫ್ಸಿ ನ್ಯಾಯಾಲಯ ಆರಂಭ : ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್

ಕಮಲಾಪುರ : ಪಟ್ಟಣದಲ್ಲಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯ (ಜೆಎಂಎಫ್ಸಿ) ಹಾಗೂ ಕಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಕಾರ್ಯಚಟುವಟಿಕೆಗಳನ್ನು ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕಲಬುರಗಿ ಜಿಲ್ಲೆಯ ಆಡಳಿತ ನ್ಯಾಯಾಧೀಶ ಶಿವಶಂಕರ ಬಿ. ಅಮರಣ್ಣವರ್ ತಿಳಿಸಿದ್ದಾರೆ.
ಶುಕ್ರವಾರ ಕಮಲಾಪುರ ಪಟ್ಟಣದಲ್ಲಿ ನ್ಯಾಯಾಲಯದ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಮಂಜೂರಾದ ಸ್ಥಳ ಹಾಗೂ ತಾತ್ಕಾಲಿಕವಾಗಿ ನ್ಯಾಯಾಲಯ ಆರಂಭಿಸಲು ಸೂಕ್ತ ಕಟ್ಟಡಗಳ ಪರಿಶೀಲನೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದರು.
ಕಮಲಾಪುರ–ರಾಜನಾಳ ಮುಖ್ಯರಸ್ತೆಯ ಡಯಟ್ ಪಕ್ಕದ ಗುಡ್ಡದ ಮೇಲಿರುವ ನ್ಯಾಯಾಲಯದ ಶಾಶ್ವತ ಕಟ್ಟಡಕ್ಕೆ ಮಂಜೂರಾದ ಜಾಗವನ್ನು ಅವರು ವೀಕ್ಷಿಸಿದರು. ಅಲ್ಲದೇ ಕಲಮೂಡ ರಸ್ತೆಯ ರಾಮಮಂದಿರ ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಟ್ಟಡವನ್ನೂ ಪರಿಶೀಲಿಸಿದರು.
ಪ್ರಸ್ತುತ ನ್ಯಾಯಾಲಯದ ಕಾರ್ಯಚಟುವಟಿಕೆ ಆರಂಭಿಸಲು ಲೋಕೋಪಯೋಗಿ ಇಲಾಖೆಯ ಕಟ್ಟಡ ಸೂಕ್ತವಾಗಿದೆ. ಈ ಸಂಬಂಧ ಇಲಾಖೆಗೆ ಪತ್ರ ಬರೆದು ಅಗತ್ಯ ಅನುಮತಿ ಪಡೆಯಲಾಗುವುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಪರಿಶೀಲನಾ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಶ್ರೀನಿವಾಸ ನವಲೆ, ವಿಭಾಗೀಯ ಅಧಿಕಾರಿ ಸಾಹಿತ್ಯಾ ಆಲದಕಟ್ಟಿ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಸಾರ, ಕಮಲಾಪುರ ತಹಶೀಲ್ದಾರ್ ಮುಹಮ್ಮದ್ ಮೊಸಿನ್ ಅಹಮ್ಮದ್, ಡಯಟ್ ಪ್ರಾಂಶುಪಾಲ ಬಸವರಾಜ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಎಇಇ ಉಷಾರಾಣಿ ಪಾಟೀಲ್, ಎಇ ಶಶಿಕಾಂತ ಕಮಲಾಪುರಕರ್, ಉಪ ತಹಶೀಲ್ದಾರ್ ಶರಣಬಸಪ್ಪ ಜಾಲಹಳ್ಳಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂಜೀವಕುಮಾರ ಕುಳಿಕೆರಿ, ಸಿಪಿಐ ಶಿವಶಂಕರ ಸಾಹು, ಕಂದಾಯ ನಿರೀಕ್ಷಕ ಮಂಜುನಾಥ ಬಿರಾದಾರ, ಅಂದಪ್ಪ ಓಕಳಿ, ಅವಿನಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






