ಕಲಬುರಗಿ | ಕಳಪೆ ಕಾಮಗಾರಿ ಆರೋಪ; ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತಕರ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ : ಅನೇಕ ಕಡೆ ಕಳಪೆ ಕಾಮಗಾರಿ ಮಾಡಿದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತಕ ಅಮಾನತು ಮಾಡಬೇಕು ಇಲ್ಲವೇ ವರ್ಗಾವಣೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಸೇನೆಯ ಸಂಸ್ಥಾಪ ಅಧ್ಯಕ್ಷ ದತ್ತು ಹೈಯಾಳಕರ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದರು.
ನಗರದ ವಿವಿಧ ಬಡಾವಣೆಗಳಾದ ಬ್ರಹ್ಮಪೂರ, ಬಸವ ನಗರ, ತಾರ್ಪೈಲ್, ಸಂಜುನಗರ, ಚಿಂಚೋಳಿ ತಾಲೂಕಿನ ಚಂದಾಪೂರ ಹೀಗೆ ಅನೇಕ ಕಡೆಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, 2018-19ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ತಾರ್ಫೈಲ್ ಬಡಾವಣೆಗೆ 350 ಮನೆಗಳು ಮಂಜೂರಾಗಿರುತ್ತವೆ, ಈ ಮನೆಗಳ ಪೈಕಿ 300 ಮನೆಗಳು ನಿರ್ಮಾಣವಾಗಿರುತ್ತವೆ, ಮಾಡಿರುವ 300 ಮನೆಗಳು ಕಳಪೆ ಗುಣಮಟ್ಟದ್ದಾಗಿರುತ್ತವೆ ಎಂದು ದೂರಿದ್ದಾರೆ.
ಈ ಹಿಂದೆಯು ಕೂಡಾ ಸ್ಲಂ ಬೋರ್ಡ್ ಸಹಾಯಕ ಅಭಿಯಂತರರ ಗಮನಕ್ಕೆ ತರಲಾಗಿದೆ, ಆದರೂ ಕೂಡಾ ಯಾವುದೇ ಸರಿಯಾದ ಸ್ಪಂದನೆ ದೊರಕಿರುವುದಿಲ್ಲ, ಇದರಲ್ಲಿ ಸುಮಾರು 40,000 ದಿಂದ 50,000 ರೂ. ರವರಗೆ ಖರ್ಚು ಮಾಡಿ 120 ಮನೆಗಳು ಫಲಾನುಭವಿಗಳು ಸಾಲ-ಸೂಲ ಮಾಡಿ ಅಲ್ಲಿನ ಸ್ಥಳಿಯರು ಖುದ್ದಾಗಿ ತಾವೇ ನಿರ್ಮಿಸಿಕೊಂಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಅಧಿಕಾರಿಗಳಿಗೆ ವರ್ಗಾವಣೆ ಮಾಡಬೇಕು, ಕಳಪೆ ಮಟ್ಟದ ಕೆಲಸಕ್ಕೆ ಕಾರಣಿಕರ್ತರಾದ ಅಧಿಕಾರಿಗಳ ವಿರುದ್ಧ ಶೀಘ್ರದಲ್ಲಿ ಕ್ರಮಕೈಗೊಂಡು ಫಲಾನುಭವಿಗಳಿಗೆ ಬರಬೇಕಾದ ಸಂಪೂರ್ಣ ಹಣ ಹಾಗೂ ನ್ಯಾಯ ಒದಗಿಸಿಕೊಡಬೇಕು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಚಿಂಚೋಳಿ ತಾಲೂಕು ಅಧ್ಯಕ್ಷ ಅಜರ್ ಸೌದಾಗರ, ಜಿಲ್ಲಾ ಉಪಾಧ್ಯಕ್ಷೆ ಶ್ರೀದೇವಿ ಮುತ್ತಂಗಿ, ದಕ್ಷಿಣ ಅಧ್ಯಕ್ಷ ಬಸವರಾಜ ಹೈಯಾಳಕರ್ ಸೇರಿದಂತೆ ಇತರರು ಇದ್ದರು.







