ಕಲಬುರಗಿ | ನಾಳೆ (ಎ.22) ರಂದು ತತ್ವಪದ ಗಾಯಕ ಅಮೃತಪ್ಪ ಅಣೂರ ಅವರಿಗೆ ಅಭಿನಂದನಾ ಸಮಾರಂಭ : ವಿಜಯಕುಮಾರ ತೇಗಲತಿಪ್ಪಿ

ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ತತ್ವಪದ ಗಾಯಕ-ಆಧ್ಯಾತ್ಮಿಕ ಚಿಂತಕ ಅಮೃತಪ್ಪ ಅಣುರ ಕವಿ-82 ಪ್ರಯುಕ್ತ ಅಭಿನಂದನಾ ಸಮಾರಂಭ ಹಾಗೂ ಅಣೂರ ಕವಿಗಳ ಆಧ್ಯಾತ್ಮಿಕ ತತ್ವಪದಗಳು ಯುಟ್ಯೂಬ್ ಗೆ ಅಳವಡಿಸುವಿಕೆಯ ಸಾಂಕೇತಿಕ ಕಾರ್ಯಕ್ರಮವನ್ನು ಎ.22 ರ ಬೆಳಗ್ಗೆ 11.30 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಹಿರಿಯ ತತ್ವಪದ ಗಾಯಕ ಅಮೃತಪ್ಪ ಅಣೂರ ಕವಿಗಳು ರಚಿಸಿದ ತತ್ವಪದಗಳಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಜೀವನ ಮೌಲ್ಯಗಳ ಮಕರಂದ ಹೊರಸೂಸಿದೆ. ಆತ್ಮಜ್ಞಾನದ ಅರಿವು ಮೂಡಿಸಿಕೊಂಡು, ತನ್ನನ್ನು ತಾನು ತಿಳಿದುಕೊಳ್ಳಲು ಈ ತತ್ವಪದಗಳು ಸಹಾಯ ಮಾಡುತ್ತವೆ. ಇವು ಒಂದೇ ದಿನದಲ್ಲಿ ಕವಿ ಹೃದಯದಲ್ಲಿ ಮೂಡಿ ಬಂದವುಗಳಲ್ಲ. ಅವರ ಬದುಕಿನ ಐದು ದಶಕಗಳ ಕಾಲ ಚಿಂತನ-ಮಂಥನದಿಂದ ಹೊರ ಬಂದಿವೆ. ಕವಿಗಳು ರಚಿಸಿದ ತತ್ವಪದಗಳು ಸಾರ್ವಕಾಲಿಕ ಸತ್ಯ ಹಾಗೂ ನಿತ್ಯ ನೂತನವಾಗಿವೆ.
ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಡಾ.ಮಲ್ಲಣ್ಣಪ್ಪ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಅಧ್ಯಕ್ಷತೆ ವಹಿಸಲಿದ್ದು, ಕೆ.ಕೆ.ಸಿ.ಸಿ.ಐ. ನ ಅಧ್ಯಕ್ಷ ಶರಣು ಪಪ್ಪಾ, ಗುರೂಜಿ ಡಿಗ್ರಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ವಿಜಯಾನಂದ ಸುರವಸೆ, ಶಿವಾನಂದ ಸುರವಸೆ, ರಾಜಕುಮಾರ ಸುರವಸೆ, ಬಸವರಾಜ ಸುರವಸೆ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.







