Kalaburagi | ಸೆ.22ರಿಂದ ಲಾಡ್ಲೆ ಮಶಾಖ್ ಅನ್ಸಾರಿ (ರಹ) ದರ್ಗಾದ 671ನೇ ವಾರ್ಷಿಕ ಉರೂಸ್

ಕಲಬುರಗಿ : ಆಳಂದ ಪಟ್ಟಣದ ಪ್ರಸಿದ್ಧ ಸೂಫಿ ಸಂತ ಲಾಡ್ಲೆ ಮಶಾಖ್ ಅನ್ಸಾರಿ (ರಹ.) ದರ್ಗಾ ಶರೀಫ್* ನಲ್ಲಿ 671ನೇ ವಾರ್ಷಿಕ ಉರೂಸ್ ಶರೀಫ್ ಅಂಗವಾಗಿ ಸೆ.22 ಮತ್ತು 23ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದರ್ಗಾ ಮ್ಯಾನೇಜಿಂಗ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಬ್ಬಾನಿ ಅನ್ಸಾರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22ರಂದು ಸಂಜೆ 4 ಗಂಟೆಗೆ ಸಂದಲ್ (ಗಂಧ) ಶರೀಫ್ ಜಲೂಸ್ ನಡೆಯಲಿದೆ. ಹೊಸ ತಹಶೀಲ್ದಾರ್ ಕಚೇರಿಯಿಂದ ಮೆರವಣಿಗೆ ಆರಂಭವಾಗಲಿದ್ದು, ತಹಶೀಲ್ದಾರ್ ಅವರು ಸಂದಲ್ ಅನ್ನು ತಲೆಯ ಮೇಲೆ ಹೊತ್ತುಕೊಂಡು ಹಳೆಯ ತಹಶೀಲ್ದಾರ್ ಕಚೇರಿಗೆ ತಂದು ದರ್ಗಾದ ಮುತವಲ್ಲಿಗೆ ಹಸ್ತಾಂತರಿಸಲಿದ್ದಾರೆ. ಬಳಿಕ ಮೆರವಣಿಗೆಯ ಮೂಲಕ ಸಂದಲ್ ತಡರಾತ್ರಿ ದರ್ಗಾ ಶರೀಫ್ ತಲುಪಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಬಿ.ಆರ್. ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸೆಪ್ಟೆಂಬರ್ 23ರಂದು ಜಷ್ನ್-ಎ-ಚಿರಾಗಾನ್ (ದೀಪೋತ್ಸವ) ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಖುರಾನ್ ಪಠಣ, ಮಧ್ಯಾಹ್ನ 2 ಗಂಟೆಗೆ ದುರೂದ್-ಓ-ಸಲಾಮ್ ಹಾಗೂ ಫಾತಿಹಾ ಖ್ಯಾನಿ ನೆರವೇರಲಿದೆ. ರಾತ್ರಿ ಇಶಾ ನಮಾಜ್ ಬಳಿಕ ದರ್ಗಾ ಆವರಣದಲ್ಲಿ ಮುಂಬೈನ ಖ್ಯಾತ ಕವ್ವಾಲಿ ಗಾಯಕರಿಂದ ಕವ್ವಾಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉರುಸ್ ಶರೀಫ್ನಲ್ಲಿ ವಿವಿಧ ರಾಜ್ಯಗಳಿಂದ ಸಜ್ಜಾದ ನಶೀನ್ಗಳು ಹಾಗೂ ಧಾರ್ಮಿಕ ಗಣ್ಯರು ಭಾಗವಹಿಸಲಿದ್ದು, ವಿವಿಧ ಧರ್ಮಗಳ ಜನರು ಸೌಹಾರ್ದತೆಯಿಂದ ಪಾಲ್ಗೊಳ್ಳುವುದು ಈ ಉತ್ಸವದ ವಿಶೇಷತೆ ಎಂದು ಹೇಳಿದರು. ದರ್ಗಾಕ್ಕೆ ಮೊದಲ ಹೂವು ಅರ್ಪಿಸುವುದು ಸೇರಿದಂತೆ ಹಲವು ಸೇವಾ ಕಾರ್ಯಗಳಲ್ಲಿ ಅನ್ಯಧರ್ಮೀಯರೂ ಭಾಗಿಯಾಗುತ್ತಾರೆ ಎಂದು ತಿಳಿಸಿದರು.
ಉರೂಸ್ ಶರೀಫ್ ಸಮಾಪ್ತಿಯ ಬಳಿಕ ಭಕ್ತರಿಂದ ಗ್ಯಾರಹವಿ ಕಾರ್ಯಕ್ರಮವೂ ನಡೆಯಲಿದೆ. ಆಳಂದ ದರ್ಗಾ ಶರೀಫ್ ಆವರಣದಲ್ಲಿ ನಡೆಯುವ ಉರುಸ್ ಶರೀಫ್ಗೆ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದರ್ಗಾ ಮ್ಯಾನೇಜಿಂಗ್ ಕಮಿಟಿ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಯುನೂಸ್ ಅನ್ಸಾರಿ, ನೋಹಿದ್ ಅನ್ಸಾರಿ, ಖಮರುದ್ದೀನ್ ಅನ್ಸಾರಿ, ಮಝಾರ್ ಅನ್ಸಾರಿ ಹಾಗೂ ಮಶಾಖ್ ಅನ್ಸಾರಿ ಉಪಸ್ಥಿತರಿದ್ದರು.






