ಕಲಬುರಗಿ | ಅಮರ್ಜಾ ಡ್ಯಾಂಗೆ ನೀರು ತುಂಬಿಸುವ ಯೋಜನೆಗೆ ಅಡ್ಡಿ ಆರೋಪ; ರೈತರಿಂದ ಪಾದಯಾತ್ರೆ

ಆಳಂದ: ಬೋರಿ ನದಿಯಿಂದ ಅಮರ್ಜಾ ಡ್ಯಾಂಗೆ ನೀರು ತುಂಬಿಸುವ ಪೈಪ್ಲೈನ್ ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಫಜಲಪುರ ತಾಲೂಕಿನ ಅರ್ಜುಣಗಿ ಬಳಿ ಕಡಿತಗೊಳಿಸಿರುವುದನ್ನು ವಿರೋಧಿಸಿ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಸಾವಿರಾರು ರೈತರು ಗುರುವಾರ ಪಾದಯಾತ್ರೆ ನಡೆಸಿದರು.
ತಾಲೂಕಿನ ಹಡಲಗಿ ಗ್ರಾಮದ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದಿಂದ ಅರ್ಜುಣಗಿ ರಾಷ್ಟ್ರೀಯ ಹೆದ್ದಾರಿವರೆಗೆ ಪಾದಯಾತ್ರೆ ನಡೆಯಿತು. ಬೋರಿ ನದಿಯಿಂದ ಅಮರ್ಜಾ ಡ್ಯಾಂಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಂಡು ಪ್ರಗತಿಯಲ್ಲಿರುವ ಹಂತದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಪೈಪ್ಲೈನ್ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪಾದಯಾತ್ರೆ ವೇಳೆ ಮಾತನಾಡಿದ ಆರ್.ಕೆ. ಪಾಟೀಲ, ಪೈಪ್ಲೈನ್ ಕಡಿತಗೊಳಿಸಿರುವುದನ್ನು ಸರಿಪಡಿಸುವಂತೆ ಶಾಸಕ ಬಿ.ಆರ್. ಪಾಟೀಲ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಾಲ್ಕು ಬಾರಿ ಪತ್ರ ಬರೆದಿದ್ದರೂ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಯೋಜನೆಯಿಂದ ಅಫಜಲಪುರ ತಾಲೂಕಿನ 10 ಕೆರೆಗಳಿಗೆ ನೀರು ಒದಗಿಸಲು ಸಾಧ್ಯವಾಗಲಿದ್ದು, ಇದು ರೈತರ ಪಾಲಿಗೆ ಮಹತ್ವದ ಯೋಜನೆಯಾಗಿದೆ. ಹೀಗಾಗಿ ಪೈಪ್ಲೈನ್ ಕಡಿತಗೊಳಿಸಿರುವುದನ್ನು ತಕ್ಷಣ ಸರಿಪಡಿಸಿ ಕಾಮಗಾರಿ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ರೈತರು ಹೋರಾಟಕ್ಕೆ ಸಹಕಾರ ಹಾಗೂ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪಾದಯಾತ್ರೆಯಲ್ಲಿ ಅಶೋಕ ಸವಳೇಶ್ವರ, ಗುರುಶಾಂತಪ್ಪ ಪಾಟೀಲ, ಶರಣಬಸಪ್ಪ ಭೋಸನೂರ, ಈರಣ್ಣ ಝಳಕಿ, ರೇವಣಸಿದ್ದಪ್ಪ ನಾಗೂರ, ಆದಿನಾಥ ಹೀರಾ, ಸಿದ್ದರಾಮ ಪ್ಯಾಟಿ, ಬಾಬು ಗೊಬ್ಬುರ, ವೀರೇಂದ್ರ ಶೇಗಜಿ, ಆಸಿಫ್ ಮುಲ್ಲಾ ಯಳಸಂಗಿ, ಶ್ರೀಮಂತ ವಾಗದರ್ಗಿ, ಬಸವರಾಜ ಆಳಂದ, ಈರಣ್ಣ ಹತ್ತರಕಿ, ಲಿಂಗರಾಜ ಪಾಟೀಲ, ರೇವಣಪ್ಪ ನಾಗೂರೆ, ಆಲೂಗೌಡ ಪಾಟೀಲ, ಶಿವಕಿರಣ ಪಾಟೀಲ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.
ಪಾದಯಾತ್ರೆ ಹಿನ್ನೆಲೆಯಲ್ಲಿ ನಿಂಬರ್ಗಾ ಹಾಗೂ ಮಾದನ ಹಿಪ್ಪರಗಾ ಪೊಲೀಸ್ ಠಾಣೆಗಳ ವತಿಯಿಂದ ಇಂದೂಮತಿ ಹಾಗೂ ಮಹಾಂತೇಶ ಪಾಟೀಲ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.






