Kalaburagi | ಎಸ್ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವ ಅಗತ್ಯ: ಡಾ.ಅಸ್ಗರ್ ಚುಲ್ಬುಲ್

ಕಲಬುರಗಿ: ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮ್ಯಾಪಿಂಗ್ ಪ್ರಕ್ರಿಯೆಯ ಭಾಗವಾಗಿ ನಡೆಯುತ್ತಿರುವ ಎಸ್ಐಆರ್ ಕಾರ್ಯದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ, ಅಗತ್ಯ ದಾಖಲೆಗಳನ್ನು ಸರಿಯಾಗಿ ಸಲ್ಲಿಸುವ ಮೂಲಕ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ನ ರಾಷ್ಟ್ರೀಯ ಏಕತಾ ವಿಭಾಗದ ರಾಷ್ಟ್ರೀಯ ಕಾರ್ಯದರ್ಶಿ ಡಾ. ಮುಹಮ್ಮದ್ ಅಸ್ಗರ್ ಚುಲ್ಬುಲ್ ಕರೆ ನೀಡಿದರು.
ನಗರದ ಕಮರ್ ಕಾಲೋನಿಯ ಶಾಲಿಮಾರ್ ಫಂಕ್ಷನ್ ಹಾಲ್ನಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ‘ಎಸ್ಐಆರ್ ಸಾರ್ವಜನಿಕ ಜಾಗೃತಿ ಅಭಿಯಾನ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೂನ್ 30ರಿಂದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಮ್ಯಾಪಿಂಗ್ಗೆ ಸಂಬಂಧಿಸಿದ ನಮೂನೆಗಳನ್ನು ವಿತರಿಸಲಿದ್ದು, ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಿ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳು ಉಂಟಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಫಾರ್ಮ್ ಭರ್ತಿ ಮಾಡುವಾಗ ಹೆಸರು, ವಿಳಾಸ ಸೇರಿದಂತೆ ಎಲ್ಲ ವಿವರಗಳನ್ನು ಪರಿಶೀಲಿಸಿ ಸಲ್ಲಿಸಬೇಕು. ಅನಕ್ಷರಸ್ಥರು ಹಾಗೂ ಮಾಹಿತಿಯ ಕೊರತೆ ಹೊಂದಿರುವವರಿಗೆ ನೆರವು ನೀಡುವ ಮೂಲಕ ಸಮಾಜದ ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಅಥವಾ ದಾಖಲೆ ಸಂಬಂಧಿತ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ಚುನಾವಣಾ ಅಧಿಕಾರಿಗಳಿಂದ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಮತದಾರರು ತಮ್ಮ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಂಡು ಸಲ್ಲಿಸಬೇಕು ಎಂದು ಡಾ. ಅಸ್ಗರ್ ಚುಲ್ಬುಲ್ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಜಮೀಯತ್ ಉಲೇಮಾ-ಎ-ಹಿಂದ್ ಕರ್ನಾಟಕ ಉಪಾಧ್ಯಕ್ಷ ಮೌಲಾನಾ ಶರೀಫ್ ಮಝ್ಹರಿ, ಎಸ್ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ನಿರ್ಲಕ್ಷ್ಯ ವಹಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಸಿಟಿ ಘಟಕದ ಅಮೀರ್ ಡಾ. ಹುಸೇನ್ ಮಾತನಾಡಿ, ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದ್ದು, ಸಾಮಾಜಿಕ ಹಾಗೂ ಧಾರ್ಮಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹೇಳಿದರು.
ಜಮೀಯತ್ ಅಹ್ಲೆ ಹದೀಸ್ ಕಲಬುರಗಿ ಅಮೀರ್ ಬಾಬಾ ನಝರ್ ಮುಹಮ್ಮದ್ ಖಾನ್ ಮಾತನಾಡಿ, ನಿಗದಿತ ಅವಧಿಯೊಳಗೆ ಅಗತ್ಯ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.
ಮೌಲಾನಾ ಮುಹಮ್ಮದ್ ನೂಹ್ ಅವರು ಫಾರ್ಮ್ಗಳಲ್ಲಿ ವೈಯಕ್ತಿಕ ವಿವರಗಳನ್ನು ತಪ್ಪಿಲ್ಲದಂತೆ ದಾಖಲಿಸುವ ಮಹತ್ವವನ್ನು ವಿವರಿಸಿದರು. ಇಂಜಿನಿಯರ್ ಮುಷ್ತಾಕ್ ಅಹ್ಮದ್ ಅವರು ನಮೂನೆಗಳನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಕುರಿತು ಸಭಿಕರಿಗೆ ಮಾಹಿತಿ ನೀಡಿದರು.
ಜಂಟಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ಅಫ್ಜಲ್ ಮಹಮೂದ್ ಹಾಗೂ ಅಧ್ಯಕ್ಷ ಮುನ್ನಾ ಧಾರವಾಡ ಅವರು ಅಭಿಯಾನ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾಜಿ ಮೇಯರ್ ಮುಹಮ್ಮದ್ ಜಾಹಿದ್, ಸದಾಯೆ ಇನ್ಸಾನಿಯತ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಅಬ್ದುಲ್ ಹಮೀದ್ ಬಾಖವಿ ದಾನಿಶ್, ಉದ್ಯಮಿ ಮುಹಮ್ಮದ್ ಇಸ್ಮಾಯಿಲ್, ಅಸದ್ ಅಲಿ ಅನ್ಸಾರಿ, ಆದಿಲ್ ಸುಲೈಮಾನ್ ಸೇಠ್, ಮೌಲಾನಾ ಹಾಫೀಜ್ ಅಜ್ಮತ್ ಫಾರೂಖಿ ಉಮರಿ, ಮಹಮೂದ್ ಶಾ, ಮುಹಮ್ಮದ್ ಜಾವೇದ್ ಖಾನ್, ತೌಫೀಕ್ ದೇಸಾಯಿ, ಸದ್ದಾಂ ಹುಸೇನ್ ಮದ್ರಾಸಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.






