ಕಲಬುರಗಿ | ವಾಡಿ ಮಾರುಕಟ್ಟೆಯಲ್ಲಿ ಶೌಚಾಲಯ ಸೌಲಭ್ಯ ಒದಗಿಸಲು ಮನವಿ

ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದ ಬೀದಿಗಳಲ್ಲಿ ಪ್ರತಿ ಗುರುವಾರ ವಾರದ ಸಂತೆ ನಡೆದುಕೊಂಡು ಬರುತ್ತಿದ್ದು, ತರಕಾರಿ ಮಾರಲು ಸೂಕ್ತ ಜಾಗವಿಲ್ಲದೆ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ವಾರದ ಸಂತೆ ಸುಗಮವಾಗಿ ಸಾಗಲು ಸೂಕ್ತವಾದ ಮಾರುಕಟ್ಟೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್ಯುಸಿಐ) ಕಮ್ಯುನಿಸ್ಟ್ ಪಕ್ಷ ಆಗ್ರಹಿಸಿದೆ.
ಈ ಕುರಿತು ಗುರುವಾರ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಎಸ್ಯುಸಿಐ (ಕಮ್ಯುನಿಸ್ಟ್) ನಾಯಕರು, ಅಧಿಕೃತ ಸಂತೆ ಮಾಳ ನಿರ್ಮಿಸುವಂತೆ ಒತ್ತಾಯ ಮಾಡಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಬೆಳೆಯುತ್ತಿರುವ ನಗರವಾಗಿದೆ. ಇಂಗಳಗಿ, ಕುಂದನೂರ, ಬಳವಡಗಿ, ಕೊಂಚೂರ, ಹಲಕರಟಿ, ಕಮರವಾಡಿ, ಸೂಲಹಳ್ಳಿ, ರಾಮನಗರ ತಾಂಡಾ, ಮೌಳಿ ತಾಂಡಾ, ಕಡಬೂರ, ಚಾಮನೂರ, ಕೈಲಾಸ ನಗರ, ಲಕ್ಷ್ಮೀಪುರವಾಡಿ ಗ್ರಾಮಸ್ಥರ ಮಾರುಕಟ್ಟೆ ಕೇಂದ್ರ ಸ್ಥಾನವಾಗಿದೆ. ಎಲ್ಲಾ ರೀತಿಯ ಅಗತ್ಯ ವಸ್ತುಗಳ ಖರೀದಿಗೆ ವಾಡಿ ಪಟ್ಟಣದ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಇಲ್ಲಿ ಗುರುವಾರ ದೊಡ್ಡ ಸಂತೆ ನಡೆಯುತ್ತದೆ. ಆದರೆ ಸಂತೆ ನಡೆಯಲು ಸೂಕ್ತವಾದ ಜಾಗದ ಕೊರತೆಯಿದೆ. ಇಕ್ಕಟ್ಟಾದ ಗಲ್ಲಿ ರಸ್ತೆಗಳಲ್ಲಿ ಸಂತೆ ನಡೆಯುತ್ತಿರುವುದರಿಂದ ಗ್ರಾಹಕರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾದ ಪರಸ್ಥಿತಿಯಿದೆ ಎಂದು ವಿವರಿಸಿದ್ದಾರೆ.
ವಿವಿಧ ಗ್ರಾಮಗಳಿಂದ ತರಕಾರಿ ವ್ಯಾಪಾರಕ್ಕೆ ಬರುವ ನೂರಾರು ಜನ ವ್ಯಾಪಾರಿಗಳು ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದ್ದಾರೆ. ವಿಶೇಷವಾಗಿ ಮಹಿಳಾ ವ್ಯಾಪಾರಿಗಳು ಬೆಳಗ್ಗೆಯಿಂದ ಸಂಜೆ ವರೆಗೆ ಮಲಮೂತ್ರ ವಿಸರ್ಜನೆ ತಡೆದುಕೊಂಡು ಹಿಂಸಿ ಅನುಭವಿಸುತ್ತಿದ್ದಾರೆ. ಪಟ್ಟಣದ ಯಾವೂದೇ ಸ್ಥಳದಲ್ಲಿ ಸಾರ್ವಜನಿಕ ಮೂತ್ರಾಲಯಗಳು ನಿರ್ಮಿಸಿಲ್ಲ. ಪುರಸಭೆ ಆಡಳಿತ ಜಾರಿಯಾಗಿ ಮೂವತ್ತು ವರ್ಷಗಳು ಕಳೆದರೂ ಸುಲಭ ಶೌಚಾಲಯ ವ್ಯವಸ್ಥೆ ಕಲ್ಪಿಸುವಲ್ಲಿ ಪುರಸಭೆ ಆಡಳಿತ ವಿಫಲವಾಗಿದೆ. ಅಲ್ಲದೆ ವಾರದ ಸಂತೆಗೆ ಬರುವ ಗ್ರಾಮೀಣ ಭಾಗದ ತರಕಾರಿ ವ್ಯಾಪಾರಿಗಳನ್ನು ಪುರಸಭೆ ಸಿಬ್ಬಂದಿಗಳೇ ಒಕ್ಕಲೆಬ್ಬಿಸಿ ದೌರ್ಜನ್ಯ ಎಸಗುತ್ತಿದ್ದು, ಇದು ನಿಲ್ಲಬೇಕು. ರಸ್ತೆಗಳನ್ನು ಅತಿಕ್ರಮಿಸಿ ಕೆಲವರು ವ್ಯಾಪಾರ ಮಾಡುತ್ತಿದ್ದು, ಕೊಳೆತ ಹಣ್ಣು ಮಾರುವ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಆದಷ್ಟು ಬೇಗ ಅಗತ್ಯ ಸೌಲಭ್ಯಗಳಿರುವ ಮಾರುಕಟ್ಟೆ ನಿರ್ಮಿಸಬೇಕು. ಅಲ್ಲಿವರೆಗೆ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಈ ಬೇಡಿಕೆಗಳನ್ನು ಈಡೇರಿಸಲು ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಸ್ಯುಸಿಐ ವಾಡಿ ನಗರ ಸಮಿತಿ ಕಾರ್ಯದರ್ಶಿ ಶರಣು ಹೇರೂರ ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ರಾಜು ಒಡೆಯರಾಜ್, ಚಂದ್ರಕಾಂತ ಪಗಲಾಪುರ, ಶ್ರೀಶೈಲ ಕೆಂಚಗುಂಡಿ ಸೇರಿದಂತೆ ಇತರರು ನಿಯೋಗದಲ್ಲಿ ಇದ್ದರು.







