ಕಲಬುರಗಿ | ಸಂತ್ರಾಸವಾಡಿ ಕಮಾನ್ ನಿರ್ಮಾಣ ಶ್ಲಾಘಿಸಿ ಠರಾವು ಪಾಸ್ ಮಾಡುವಂತೆ ಆಗ್ರಹ

ಕಲಬುರಗಿ: ಇಲ್ಲಿನ ಸಂತ್ರಾಸವಾಡಿಗೆ ತೆರಳುವ ಮಾರ್ಗದಲ್ಲಿ ನಿರ್ಮಿಸಿದ್ದ ಕಮಾನ್ ನಿರ್ಮಾಣವನ್ನು ಶ್ಲಾಘಿಸಿ ಮಹಾನಗರ ಪಾಲಿಕೆ ಠರಾವು ಪಾಸ್ ಮಾಡಬೇಕೆಂದು ಸಿಟಿಜನ್ಸ್ ಫೋರಮ್ ಫಾರ್ ಪೀಸ್ ಮತ್ತು ಜಸ್ಟೀಸ್ ಕಲಬುರಗಿ ವತಿಯಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸಂತ್ರಾಸವಾಡಿಯ ನಿವಾಸಿಗಳು ಸೇರಿಕೊಂಡು ಒಂದು ಸುಂದರವಾದ ಕಮಾನ್ ಕಟ್ಟಿದ್ದಾರೆ. ಅದಕ್ಕಾಗಿ ತಮ್ಮ ದುಡಿಮೆಯ ಭಾಗವನ್ನು ವ್ಯಯಿಸಿ ಆ ಭಾಗವನ್ನು ಸೌಂದರೀಕರಣಗೊಳಿಸಿದ್ದಾರೆ. ಈ ಕಮಾನು ದೇಶದ ಅತೀ ಮಹತ್ವದ ಒಂದು ಸೂಫಿ ದರ್ಗಾ ʼಬಂದೇನವಾಜ ದರ್ಗಾʼ ಕೈ ಹೋಗುವ ಮಾರ್ಗದ ಒಂದು ಸ್ವಾಗತ ಬಯಸುವ ಕಮಾನ್ ಆಗಿದೆ. ಈ ದರ್ಗಾಕ್ಕೆ ಭಾರತ ದೇಶದ ಹಲವಾರು ರಾಜ್ಯಗಳ ಸಾವಿರಾರು ಶುದ್ಧಾಲುಗಳು ಭೇಟಿ ನೀಡುತ್ತಾರೆ. ಅಂಥವರಿಗೆ ದಾರಿ ತೋರಿಸುವ ಕಮಾನು ಇದು ಆಗಿದೆ. ಇದಕ್ಕೆ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಈ ಕಮಾನು ಯಾರನ್ನೂ ತೊಂದರೆ ಮಾಡದಂತೆ ರಸ್ತೆಯ ಎರಡು ಕಡೆಗೆ ರಸ್ತೆ ಬಿಟ್ಟು ಕಟ್ಟಲಾಗಿದೆ. ಮಧ್ಯದ ಸಣ್ಣ ಕಂಬ ಡಿವೈಡರ್ ಜಾಗದಲ್ಲಿದೆ. ಹೀಗಾಗಿ ಇದರಿಂದ ಯಾರಿಗೂ ತೊಂದರೆ ಕೊಡುವಂತಹ ಪ್ರಶ್ನೆ ಬರುವದಿಲ್ಲ. ಬಂದೇ ನವಾಜ್ ದರ್ಗಾ ದೇಶದ ಒಂದು ಅತ್ಯಂತ ಮಹತ್ವದ ಪ್ರವಾಸಿ ಸ್ಥಳವಾಗಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರ, ಅಥವಾ ಕಲಬುರಗಿ ಮಹಾನಗರ ಪಾಲಿಕೆಯು ಬಹಳ ವರ್ಷಗಳ ಹಿಂದೆಯೇ ಇಂಥಹ ಕಮಾನ್ ರಚಿಸಬಹುದಾಗಿತ್ತು. ಆದರೆ ಅವರೆಲ್ಲ ಅದರಲ್ಲಿ ವಿಫಲರಾಗಿದ್ದಾರೆ.
ಈಗಲಾದರೂ ಅಲ್ಲಿನ ನಾಗರೀಕರು ತಮ್ಮ ಜೇಬಿನ ಹಣ ಸಂದಾಯ ಮಾಡಿ ಒಂದು ಮಹತ್ವದ ಕೆಲಸ ಮಾಡಿದ್ದಾರೆ. ಅದಕ್ಕೆ ಎಲ್ಲ ಸರಕಾರಗಳು ಮತ್ತು ಮಹಾನಗರ ಪಾಲಿಕೆ ಅವರಿಗೆ ಧನ್ಯವಾದ ಹೇಳುವ ಒಂದು ಸೌಜನ್ಯದ ಕೆಲಸ ಮಾಡಬೇಕಾಗಿತ್ತು. ಬದಲಾಗಿ ನಗರದ ಕೆಲವು ಕೋಮುವಾದಿಗಳು ಇದನ್ನು ತಮ್ಮ ಕೋಮುವಾದಿ ರಾಜಕೀಯಕ್ಕೆ ಬಳಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ದೇಶದ ಸುಪ್ರಿಂ ಕೋರ್ಟ್, ಹಲವಾರು ಹೈಕೋರ್ಟ್ ಗಳು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಮಂದಿರ, ಮಜೀದ ಕಟ್ಟಬಾರದು ಎಂದು ತೀರ್ಪು ನೀಡಿವೆ. ಆದರೂ ಕಲಬುರಗಿ ನಗರದಲ್ಲಿ ಅಂಥಹ ನೂರಾರು ಸಾರ್ವಜನಿಕ ಉದ್ಯಾನಗಳಲ್ಲಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ಕಟ್ಟಲಾಗಿದೆ. ಆದರೆ ಇದುವರೆಗೂ ಅಂತಹ ಕಾನೂನು ಬಾಹಿರ ಕಟ್ಟಡಗಳನ್ನು ಕಲಬುರಗಿ ಮಹಾನಗರ ಪಾಲಿಕೆ ಧ್ವಂಸಗೊಳಿಸಿರುವುದಿಲ್ಲ. ಇದು ಸುಪ್ರಿಂ ಕೋರ್ಟ್, ಹೈಕೋರ್ಟಗಳ ತೀರ್ಪುಗಳನ್ನು ಉಲ್ಲಂಘಿಸಿದಂತಾಗಿದೆ.
ಮೊದಲು ಕಾನೂನು ಪ್ರಕಾರ ಆ ಎಲ್ಲಾ ಆಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಸಿಟಿಜನ್ಸ್ ಫೋರಮ್ ಫಾರ್ ಪೀಸ್ ಆಂಡ ಜಸ್ಟೀಸ್ ಆಗ್ರಹಿಸಿದೆ. ಮತ್ತು ಸಂತ್ರಾಸವಾಡಿ ಸೌಂದರ್ಯ ಹೆಚ್ಚಿಸಿದ ಕಮಾನನ್ನು ಶ್ಲಾಘಿಸಿ ಕಲಬುರಗಿ ಮಹಾನಗರ ಪಾಲಿಕೆಯು ಒಂದು ನಿರ್ಣಯವನ್ನು ಅಂಗೀಕರಿಸಬೇಕೆಂದು ಮನವಿಯಲ್ಲಿ ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.
ಸಮಿತಿಯ ಸಂಚಾಲಕ ಎಮ್.ಬಿ. ಸಜ್ಜನ, ಸಹ ಸಂಚಾಲಕ ಜಾವೀದ ಹುಸೇನ ಸೇರಿದಂತೆ ಇತರರು ಇದ್ದರು.







