ಬೆಂಗಳೂರು ಕ್ಲೈಮೇಟ್ ಸಮ್ಮಿಟ್ನಲ್ಲಿ ಕಲಬುರಗಿ ಕಲಾವಿದ ರೆಹಮಾನ್ ಪಟೇಲ್ ಅವರ ಕಲಾ ಅಭಿವ್ಯಕ್ತಿ

ಕಲಬುರಗಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಮೋವ್ ಫೌಂಡೇಶನ್ ಆಯೋಜಿಸಿದ್ದ ಪ್ರತಿಷ್ಠಿತ “ಬೆಂಗಳೂರು ಕ್ಲೈಮೇಟ್ ಸಮ್ಮಿಟ್–ಆಲ್ಟರ್ನೇಟಿವ್ 26” ಕಾರ್ಯಕ್ರಮದಲ್ಲಿ ಕಲಬುರಗಿ ಮೂಲದ ಕಲಾವಿದ ಹಾಗೂ ಸಂಶೋಧಕ ರೆಹಮಾನ್ ಪಟೇಲ್ ಭಾಗವಹಿಸಿ ತಮ್ಮ ಕಲಾಕೃತಿಯ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಅನಾವರಣಗೊಳಿಸಿದರು.
ಬೆಂಗಳೂರು ನಗರದ ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಲ್ಲಿ ಜೂನ್ 4 ಮತ್ತು 5ರಂದು ನಡೆದ ಎರಡು ದಿನಗಳ “ಆರ್ಟ್ ಫಾರ್ ಕ್ಲೈಮೇಟ್ ಲೈವ್ ಆರ್ಟ್ ಕ್ಯಾಂಪ್” ಕಾರ್ಯಕ್ರಮದಲ್ಲಿ ಅವರು ಸಮಕಾಲೀನ ಚಿತ್ರಕಲೆಯ ಮೂಲಕ ಹವಾಮಾನ ಬದಲಾವಣೆ ಹಾಗೂ ಪರಿಸರ ಅಸಮತೋಲನದ ಗಂಭೀರ ಪರಿಣಾಮಗಳನ್ನು ಬಿಂಬಿಸಿದರು.
ಪರಿಸರವಾದಿಗಳು, ನವೋದ್ಯಮಿಗಳು, ಕಲಾವಿದರು, ಸಂಶೋಧಕರು, ಚಿಂತಕರು ಹಾಗೂ ಹವಾಮಾನ ಹೋರಾಟಗಾರರು ಭಾಗವಹಿಸಿದ್ದ ಈ ಶೃಂಗಸಭೆಯಲ್ಲಿ ರೆಹಮಾನ್ ಪಟೇಲ್ ಅವರು ಕ್ಯಾನ್ವಾಸ್ ಮೇಲೆ ಬಣ್ಣಗಳ ಮೂಲಕ ಭೂಮಿಯ ಸಂರಕ್ಷಣೆಯ ಅಗತ್ಯತೆಯನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದರು. ಮಾಲಿನ್ಯ ಮತ್ತು ಪರಿಸರ ಹಾನಿಯಿಂದ ಎದುರಾಗುತ್ತಿರುವ ಸವಾಲುಗಳ ಕುರಿತು ಜಾಗೃತಿ ಮೂಡಿಸುವ ಸಂದೇಶವನ್ನು ತಮ್ಮ ಕಲಾಕೃತಿಯಲ್ಲಿ ಮೂಡಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ “ಕಲ್ಚರ್ ಫಾರ್ ಕ್ಲೈಮೇಟ್” ವಿಶೇಷ ಸಂವಾದದಲ್ಲಿ ಹಿರಿಯ ಕಲಾವಿದ ಸಿ. ಎಸ್. ಕೃಷ್ಣಶೆಟ್ಟಿ ಹಾಗೂ ಗೀತಾ ಶಿಂಧೆ ಭಾಗವಹಿಸಿ ಕಲೆ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಂಬಂಧದ ಕುರಿತು ಚರ್ಚಿಸಿದರು.
ಇದಕ್ಕೂ ಮುನ್ನ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಸಿಎಸ್ ಕ್ಯುರೇಟರ್ ಹಾಗೂ ವಿಮೋವ್ ಫೌಂಡೇಶನ್ ಸಂಸ್ಥಾಪಕ ವಿನಯ್ ಶಿಂಧೆ ಅವರೊಂದಿಗೆ “ಬೆಂಗಳೂರು ಕ್ಲೈಮೇಟ್ ಸಮ್ಮಿಟ್” ಪೋಸ್ಟರ್ ಬಿಡುಗಡೆ ಮಾಡಿದರು.
ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಲೆ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ರೆಹಮಾನ್ ಪಟೇಲ್ ಅವರ ಭಾಗವಹಿಸುವಿಕೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿತು.
ಕಾರ್ಯಕ್ರಮದಲ್ಲಿ ಆರ್ಟ್ ಕ್ಯಾಂಪ್ ನಿರ್ದೇಶಕರಾದ ಎಂ.ಜಿ. ದೊಡ್ಡಮನಿ ಹಾಗೂ ಸಂಚಾಲಕರಾದ ಗಣೇಶ್ ದೊಡ್ಡಮನಿ ಉಪಸ್ಥಿತರಿದ್ದರು.






