ಕಲಬುರಗಿ | ಪಿಡಿಓ ಅಧಿಕಾರಿ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಆಗ್ರಹ

ಕಲಬುರಗಿ : ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ ಜವರೇಗೌಡ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳು ಬೇಕು ಎಂದು ಚಿಂಚೋಳಿ ಸರಕಾರಿ ನೌಕರರ ಸಂಘ ಪ್ರತಿಭಟನೆ ಮುಖಾಂತರ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರಪ ಹೋಳ್ಕರ್, ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ ಜವರೇಗೌಡ ತಮ್ಮ ಕರ್ತವ್ಯಕ್ಕೆ ತೆರಳುವ ಸಮಯದಲ್ಲಿ ಚಾಪ್ಲಾನಾಯಕ ತಾಂಡ ಮುಖಂಡ ವಾಲೋಜಿ ಅಣುದು ರಾಠೋಡ ಶ್ರೀಧರ ಪಿಡಿಓ ಅವರಿಗೆ ಪೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ . ಅಲ್ಲದೇ ಪಿಡಿಓ ಶ್ರೀಧರರವರು ಗ್ರಾಮ ಪಂಚಾಯತಗೆ ತೆರಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿಯು ಏಕಾಏಕಿ ಕಚೇರಿಗೆ ನುಗ್ಗಿ ಪಂಚಾಯತ್ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಪಿಡಿಓ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಸರಕಾರಿ ಕರ್ತವ್ಯದಲ್ಲಿ ನಿರತರಾದ ಪಿಡಿಓ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಿ, ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕು. ಆರೋಪಿಯನ್ನು ಗಡಿಪಾರು ಮಾಡಬೇಕು. ಮುಂದಿನ ದಿನಗಳಲ್ಲಿ ಸರಕಾರಿ ನೌಕರರ ಮೇಲೆ ಹಲ್ಲೆಯಾಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ದೇವೇಂದ್ರಪ ಹೋಳ್ಕರ್, ನಿರ್ದೇಶಕರು ಜಗನ್ನಾಥ್ ರೆಡ್ಡಿ,ಮಲ್ಲಿಕಾರ್ಜುನ ಪಾಲಾಮೂರ್,ಶರಣು ಪಾಟೀಲ ಮೋತಕಪಳ್ಳಿ, ನಾಗೇಂದ್ರಪ್ಪ ಬೇಡಗಪಳ್ಳಿ ಮಲ್ಲಿಕಾರ್ಜುನ ಗಿರಿ, ರಾಮಕೃಷ ಕೊರಡಂಪಳ್ಳಿ ಗೋವಿಂದ ರೆಡ್ಡಿ, ಹೀರಾಸಿಂಗ್ ಚವ್ಹಾಣ, ಪವನಕುಮಾರ, ಶಶಿಧರ್ , ಯಲಗೋಂಡ , ಸುನೀಲಕುಮಾರ, ಫಯ್ಯಾಯ್ , ಚನ್ನವೀರ ಸ್ವಾಮಿ, ಗೋಪಾಲ ಗಾರಂಪಳ್ಳಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.





