ಕಲಬುರಗಿ | ಹಾರಕೂಡ ಶ್ರೀ, ದಾಕ್ಷಾಯಣಿ ಎಸ್.ಅಪ್ಪ ಸೇರಿದಂತೆ ಆರು ಮಂದಿಗೆ ʼಅವ್ವ ಪ್ರಶಸ್ತಿʼ

ಕಲಬುರಗಿ: ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಹತ್ತನೇ ವರ್ಷದ 2025ನೇ ಸಾಲಿನ ‘ಅವ್ವ’ ಪ್ರಶಸ್ತಿಗೆ ಹಾರಕೂಡ ಶ್ರೀ, ಡಾ.ದಾಕ್ಷಾಯಣಿ ಎಸ್. ಅಪ್ಪ ಸೇರಿದಂತೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪ್ರತಿಷ್ಠಾನದ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಪ್ರತಿಷ್ಠಾನದ ಸಂಚಾಲಕ ಡಾ. ನಾಗಪ್ಪ ಗೋಗಿ ಅವರು, ಹಾರಕೂಡದ ಷ.ಬ್ರ.ಶ್ರೀ ಡಾ.ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳವರ "ಚನ್ನಶ್ರೀವಾಣಿ" (ಅಂಕಣ ಬರಹಗಳ ಸಂಕಲನ), ಗೊರೂರು ಪಂಕಜ ಅವರ ಬೆರಗು ರೇಖೆಗಳು(ಕವನ ಸಂಕಲನ ) ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅದೇ ರೀತಿ ಶರಣಬಸವೇಶ್ವರ ಮಹಾಸಂಸ್ಥಾನದ ಡಾ.ದಾಕ್ಷಾಯಣಿ ಶರಣಬಸವಪ್ಪ ಅಪ್ಪ (ಶಿಕ್ಷಣ ಮತ್ತು ದಾಸೋಹ), ನಿವೃತ ಪ್ರಾಧ್ಯಾಪಕರು ಹಾಗೂ ಭಾಷಾ ವಿಜ್ಞಾನಿಗಳಾದ ಪ್ರೊ.ವಿ.ಜಿ.ಪೂಜಾರ(ಸಾಹಿತ್ಯ), ಕಲಬುರಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ,(ಕಾನೂನು) ಹಾಗೂ ಶರಣಮ್ಮ ಬಿ.ಪಾಟೀಲ( ಮಹಿಳಾ ಉದ್ಯಮಿ) ಅವರನ್ನು 2025 ನೇ ಸಾಲಿನ 'ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಫೆ.16ರ ಸೋಮವಾರದಂದು ಹಾರಕೂಡ ಶ್ರೀಮಠದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.





