ಕಲಬುರಗಿ | ಆ.15 ರಿಂದ ಘತ್ತರಗಾ ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಪ್ರಕಾಶ ಕುದರಿ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಸುಕ್ಷೇತ್ರ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಿ ದೇವಾಲಯದ ಆವರಣದಲ್ಲಿ ಆ.15ರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದ್ದು, ಸಾರ್ವಜನಿಕರು, ಭಕ್ತಾದಿಗಳು ಸಹಕರಿಸಬೇಕು ಎಂದು ದೇವಸ್ಥಾನದ ಅಡಳಿತಾಧಿಕಾರಿಯಾಗಿರುವ ಕೆ.ಕೆ.ಆರ್.ಡಿ.ಬಿ.ಬಿ ಮಂಡಳಿ ಅಧೀನ ಕಾರ್ಯದರ್ಶಿ ಪ್ರಕಾಶ್ ಕುದರಿ ತಿಳಿಸಿದ್ದಾರೆ.
ಬುಧವಾರ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರ ಜೊತೆ ಸಭೆ ನಡೆಸಿದ ಅವರು, ರಾಜ್ಯದ ಮುಜರಾಯಿ ಇಲಾಖೆ ಅಧೀನದ ಎಲ್ಲ ದೇವಾಲಯಗಳಲ್ಲಿ ಆ.15 ರಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದ್ದು, ಅದರಂತೆ ಘತ್ತರಗಿಯ ಶ್ರೀ ಭಾಗ್ಯವಂತಿ ದೇವಾಲಯ ಮತ್ತು ಅದರ ಅವರಣದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ನಿಯಮ ಅನ್ವಯವಾಗಲಿದೆ ಎಂದರು.
ಗ್ರಾಮದ ವ್ಯಾಪಾರಿಗಳು, ವರ್ತಕರು ಹಾಗೂ ನಾಗರಿಕರು ಪ್ಲಾಸ್ಟಿಕ್ ಬಳಕೆ ತ್ಯಜಿಸುವ ಮೂಲಕ ಪವಿತ್ರ ಧಾರ್ಮಿಕ ಸ್ಥಾನದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಸಹಕರಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದ ಎಚ್ಚರಿಕೆ ನೀಡಿರುವ ಅವರು, ಪದೇಪದೆ ಪ್ಲಾಸ್ಟಿಕ್ ಬಳಸುವುದು ಕಂಡುಬಂದಲ್ಲಿ ಕ್ರಿಮಿನಲ್ ಪ್ರಕರಣ ಸಹ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದಿದ್ದಾರೆ.
ಘತ್ತರಗಿ ಸಮೀಪದ ಭೀಮಾನದಿ ತೀರದಲ್ಲಿರುವ ಭಾಗ್ಯವಂತಿ ದೇವಿಯ ಮೂಲಸ್ನಾನ ಎಂದೇ ಗುರುತಿಸಲಾಗುವ ಗಡ್ಡಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಗ್ರಾಮದ ಮುಖಂಡರೊಂದಿಗೆ ಭೇಟಿ ನೀಡಿದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಕುದರಿ ಅವರು, ಫಾರಂ ನಂ.10 (ದೇವಸ್ಥಾನದ ಹೆಸರಿಗೆ ಪಹಣಿ) ಮಾಡಿಸಲು ಸ್ಥಳ ನಿಗದಿಪಡಿಸುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಇನ್ನು ಭೀಮಾ ನದಿ ದಂಡೆಯಲ್ಲಿ ಪ್ರಗತಿಯಲ್ಲಿರುವ ಹೈಮಾಸ್ಟ್ ದೀಪ, ಸಿ.ಸಿ.ಟಿ.ವಿ ಕ್ಯಾಮರಾ ಆಳವಡಿಕೆ ಕಾಮಗಾರಿಗಳನ್ನು ಸಹ ಇದೇ ಸಂದರ್ಭದಲ್ಲಿ ಪರಿಶೀಲಿಸಿದರು.
ಅಫಜಲಪುರ ತಹಶೀಲ್ದಾರ್ ಮಹಾಂತೇಶ್ ಮುಡಬಿ, ದೇವಾಲಯದ ಸಿಬ್ಬಂದಿ ಮಂಜುನಾಥ ನಾವಿ, ಗ್ರಾಮದ ಮುಖಂಡರಾದ ಚಂದ್ರಕಾಂತ ಹೂಗಾರ, ಬಸಯ್ಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







