Kalaburagi | ಶರಣಬಸವ ವಿಶ್ವವಿದ್ಯಾಲಯದ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ, ಸಂಶೋಧಕ, ಇಂಜಿನಿಯರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರ ಪ್ರಥಮ ಪುಣ್ಯಸ್ಮರಣೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ಇಂಜಿನಿಯರ್ಸ್ ದಿನಾಚರಣೆಯ ಅಂಗವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಬೋಧಕ ಸಿಬ್ಬಂದಿಗೆ ಅತ್ಯುತ್ತಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ವಿಶ್ವವಿದ್ಯಾಲಯದ ಸಭಾಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮುಗುಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ, ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಡಾ. ಸುಜಾತಾ ವಿ. ಮಲ್ಲಾಪುರ ಅವರಿಗೆ ‘ಅತ್ಯುತ್ತಮ ಇಂಜಿನಿಯರ್ ಪ್ರಶಸ್ತಿ–2026’, ಡಾ. ವಿರೂಪಾಕ್ಷಪ್ಪ ಅವರಿಗೆ ‘ಅತ್ಯುತ್ತಮ ಸಂಶೋಧಕ ಪ್ರಶಸ್ತಿ–2026’ ಹಾಗೂ ‘ಅತ್ಯುತ್ತಮ ಪಿಎಚ್.ಡಿ. ಮಾರ್ಗದರ್ಶಕ ಪ್ರಶಸ್ತಿ–2026’ ಪ್ರದಾನಿಸಲಾಯಿತು.
ಡಾ. ಶಿವಪ್ರಸಾದ ಬಿರಾದಾರ ಮತ್ತು ಡಾ. ನಿರುಪಮಾ ಅವರಿಗೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ–2026, ಕುಮಾರಿ ಸರಸ್ವತಿ ಮತ್ತು ಕುಮಾರಿ ತನುಶ್ರೀ ಬಿ. ಕಟ್ಟಿಮನಿ ಅವರಿಗೆ ಅತ್ಯುತ್ತಮ ಯೋಜನೆ ಪ್ರಶಸ್ತಿ–2026 ನೀಡಿ ಗೌರವಿಸಲಾಯಿತು.
ಆರು ಮಂದಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ :
ಪ್ರೊ. ಶ್ರೀಧರ ಅಣಕಲ್, ಡಾ. ಸುನೀತಾ ಬಿ. ಪಾಟೀಲ, ಪ್ರೊ. ಉದಯಕುಮಾರ ಬಿ. ಗಡಮಿ, ಡಾ. ಪ್ರಭಾವತಿ ಎಸ್. ಚಿತ್ಕೋಟಿ, ಡಾ. ನಾಗಭೂಷಣ ರೆಡ್ಡಿ ಹಾಗೂ ಪ್ರೊ. ಶರಣಬಸಪ್ಪ ವಿ.ಎಚ್. ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ–2026 ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ಇದೇ ವೇಳೆ ಶರಣಬಸವ ವಿಶ್ವವಿದ್ಯಾಲಯದ ‘ಜ್ಞಾನ ವಾಹಿನಿ’ ನಿಯತಕಾಲಿಕೆಯ ಎರಡನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಡಾ. ದಾಕ್ಷಾಯಿಣಿ ಅವ್ವಾಜಿ, ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ಶಿಕ್ಷಕರ ಬಗ್ಗೆ ಅಪಾರ ಗೌರವವಿತ್ತು. ಅವರ ಸ್ಮರಣಾರ್ಥ ಉತ್ತಮ ಬೋಧನೆ, ಸಂಶೋಧನೆ ಮತ್ತು ಶೈಕ್ಷಣಿಕ ಕೊಡುಗೆ ನೀಡಿದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಂಪರೆಯನ್ನು ಪ್ರತಿವರ್ಷವೂ ಮುಂದುವರಿಸಲಾಗುವುದು ಎಂದು ತಿಳಿಸಿದರು.






