Kalaburagi | ಜಲಜೀವನ ಮಿಷನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಭೀಮಶೆಟ್ಟಿ ಮುಕ್ಕಾ ಆಗ್ರಹ

ಕಲಬುರಗಿ : ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಭೀಮಾ ಮಿಷನ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸರ್ಕಾರವು ಪ್ರತಿಯೊಂದು ಗ್ರಾಮಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪೈಪ್ಲೈನ್ ಹಾಗೂ ಮೀಟರ್ ಅಳವಡಿಕೆ ಕಾಮಗಾರಿಗಳನ್ನು ಕೈಗೊಂಡು ಹಲವು ವರ್ಷಗಳು ಕಳೆದರೂ ಅನೇಕ ಕಡೆಗಳಲ್ಲಿ ಇನ್ನೂ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕರ ಮಾಹಿತಿಗಾಗಿ ಗ್ರಾಮ ಪಂಚಾಯತ್ಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಿಡುಗಡೆಯಾದ ಅನುದಾನದ ಮೊತ್ತ, ಕಾಮಗಾರಿಯ ಹೆಸರು, ಪೂರ್ಣಗೊಂಡ ದಿನಾಂಕ, ಗುತ್ತಿಗೆದಾರರ ಹೆಸರು ಹಾಗೂ ಗ್ರಾಮದ ವಿವರಗಳನ್ನು ಒಳಗೊಂಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಅಭಿಯಂತರರಿಗೆ ಒತ್ತಾಯಿಸಿದರು.
ಜಲಜೀವನ ಮಿಷನ್ ಯೋಜನೆಯಡಿ ಬಹುತೇಕ ಗ್ರಾಮ ಪಂಚಾಯಿತಿಗಳ ಮನೆಗಳ ನಲ್ಲಿಗಳಲ್ಲಿ ಇನ್ನೂ ಹನಿ ನೀರು ಸಹ ಸರಬರಾಜಾಗದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು.
ಯೋಜನೆಯ ಕಾಮಗಾರಿ ಹಾಗೂ ಸರ್ಕಾರದ ಹಣ ವ್ಯರ್ಥವಾಗುವ ಮುನ್ನವೇ ಮನೆಗಳಿಗೆ ನೀರು ತಲುಪಿಸುವ ಕಾರ್ಯವನ್ನು ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾಡಳಿತ ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಭೀಮಶೆಟ್ಟಿ ಮುಕ್ಕಾ ಆಗ್ರಹಿಸಿದ್ದಾರೆ.






