ಕಲಬುರಗಿ | ಸೇತುವೆಯ ನಿರ್ಮಾಣಕ್ಕೆ ತಂದಿದ್ದ ಕಬ್ಬಿಣದ ಸಲಾಕೆಗೆ ಢಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಮೃತ ಯುವಕ
ಕಲಬುರಗಿ: ಬೈಕ್ ಸವಾರನೊರ್ವ ನೂತನವಾಗಿ ಸೇತುವೆಯ ನಿರ್ಮಾಣಕ್ಕೆ ತಂದಿದ್ದ ಕಬ್ಬಿಣದ ಸಲಾಕೆಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ 9.40ರ ಸುಮಾರಿಗೆ ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ಹೊಸ ಸೇತುವೆ ಸಮೀಪ ನಡೆದಿದೆ.
ಆಳಂದ ತಾಲ್ಲೂಕಿನ ತಡಕಲ್ ಗ್ರಾಮದ ನಿವಾಸಿ ಮಹೇಶ್ ರಾಜು ನೈಕೋಡಿ(26) ಮೃತ ಯುವಕ ಎಂದು ತಿಳಿದುಬಂದಿದೆ.
ಮೃತ ಯುವಕ ಮಹೇಶ್, ಧಾರಾಕಾರ ಮಳೆ ಸುರಿಯುತ್ತಿರುವ ನಡುವೆಯೇ ಆಳಂದ ಪಟ್ಟಣದಿಂದ ತನ್ನ ಗ್ರಾಮ ತಡಕಲ್ ಕಡೆಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಆಳಂದ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Next Story





