ಕಲಬುರಗಿ | ಬಿಜೆಪಿ ಶಾಸಕ ಯತ್ನಾಳ್ ಉಚ್ಚಾಟನೆ ; ಕಾರ್ಯಕರ್ತರಿಂದ ಪ್ರತಿಭಟನೆ

ಕಲಬುರಗಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದ ಹಿನ್ನಲೆ ನಗರದಲ್ಲಿ ಗುರುವಾರ ಯತ್ನಾಳ್ ಅವರ ಅಭಿಮಾನಿಗಳು, ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಯತ್ನಾಳ್ ಪರ ಘೋಷಣೆ ಕೂಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು.
ಈ ವೇಳೆ ನಡ್ಡಾ ಮತ್ತು ವಿಜಯೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. 'ಯತ್ನಾಳ್ ಜೀ ನಾವು ನಿಮ್ಮ ಜೊತೆಗೆ ಇದ್ದೇವೆ ' ಎಂದು ಘೋಷಣೆ ಕೂಗುತ್ತ ಯತ್ನಾಳ್ ಅವರ ಪರವಾಗಿ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮೌನೇಶ್ ಕೆ ಬಡಿಗೇರ ಆಡಕಿ, ಗುಂಡು ಪಾಟೀಲ್, ವಿರೇಶ್ ಪಾಟೀಲ್, ಮಹೇಶ್ ಕೆಂಭಾವಿ, ರಾಕೇಶ್, ಈಶ್ವರ್ ಈಪ್ಪರಿಗಿ ಸೇರಿದಂತೆ ಅನೇಕರು ಇದ್ದರು.







