ಕಲಬುರಗಿ | ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ಕಲಬುರಗಿ : ಬಿಜೆಪಿ ಕಾರ್ಯಕರ್ತೆಯೊಬ್ಬರು ಇನ್ನೋರ್ವ ಬಿಜೆಪಿ ಕಾರ್ಯಕರ್ತನ ಮನೆ ಎದುರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ನಂದಿಕೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಕಲಬುರಗಿ ನಗರದ ಬ್ರಹ್ಮಪುರದ ನಿವಾಸಿ ಜ್ಯೋತಿ ಪಾಟೀಲ್(35) ಎಂದು ಗುರುತಿಸಲಾಗಿದೆ.
ಜ್ಯೋತಿ ನಂದಿಕೂರ ಗ್ರಾಮದ ಬಿಜೆಪಿ ಕಾರ್ಯಕರ್ತ ಮಲ್ಲಿನಾಥ ಬಿರಾದಾರ ಮನೆ ಎದುರು ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಘಟನೆ ನಡೆದಿರುವ ಸಂದರ್ಭದಲ್ಲಿ ಮಲ್ಲಿನಾಥ ಮನೆಯಲ್ಲಿರಲಿಲ್ಲ. ಪಕ್ಷದ ಚಟುವಟಿಕೆ ವೇಳೆಯಲ್ಲೇ ಇಬ್ಬರ ಪರಸ್ಪರ ಪರಿಚಯವಾಗಿತ್ತು. ಇಬ್ಬರು ಹಣಕಾಸು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





