ಕಲಬುರಗಿ | ಭೀಮಾ ನದಿಯಲ್ಲಿ ನೀರು ಪಾಲಾಗಿದ್ದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಪತ್ತೆ

ಕಲಬುರಗಿ: ಅಫಜಲಪುರ ತಾಲ್ಲೂಕಿನ ಮಣೂರ ಗ್ರಾಮದ ಸಮೀಪದ ಭೀಮಾ ನದಿಯಲ್ಲಿ ನೀರುಪಾಲಾಗಿದ್ದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಮಣೂರ ಗ್ರಾಮದ ನಿವಾಸಿ ಭಾಗೇಶ್ ರೇವಣಸಿದ್ದಪ್ಪ (19) ಎಂಬ ಯುವಕ ಶನಿವಾರ ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ನದಿಗೆ ಬಿದ್ದಿದ್ದ. ಬಳಿಕ ಆತನ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು. ಎರಡು ದಿನಗಳ ನಿರಂತರ ಕಾರ್ಯಾಚರಣೆಯ ನಂತರ ದೇವಣಗಾಂವ್ ಗ್ರಾಮದ ಭೀಮಾ ನದಿಯ ತೀರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹ ಪತ್ತೆಯಾದ ನಂತರ ಕುಟುಂಬಸ್ಥರು ಗುರುತಿಸಿದ್ದು, ಅಫಜಲಪುರ ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.
ಮೃತ ಭಾಗೇಶ್ ಅವರ ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರು ಸೋಮವಾರ ಮಧ್ಯಾಹ್ನ 2 ಗಂಟೆಗೆ ನೆರವೇರಿಸಿದರು.
Next Story





