Kalaburagi | ಶೂನ್ಯ ಲಿಂಗ ವಿವೇಚನೆ ಭಾಗ-5 ಕೃತಿ ಬಿಡುಗಡೆ ಸಮಾರಂಭ
ಯುವ ಪೀಳಿಗೆಗೆ ವಚನ ಸಾಹಿತ್ಯ ಪರಿಚಯಿಸಬೇಕು: ಅಲ್ಲಮಪ್ರಭು ನಾವದಗೆರೆ

ಕಲಬುರಗಿ : ಕಾಯಕದ ಮೂಲಕ ಉತ್ಪಾದನೆ ಮಾಡಿ ಸಮಾಜದ ಎಲ್ಲರಿಗೂ ಹಂಚುವ ಶರಣ ಸಂಸ್ಕೃತಿಯನ್ನು ಇಂದಿನ ಸಮಾಜದಲ್ಲಿ ಬಿತ್ತಿ ಬೆಳೆಸುವ ಅಗತ್ಯವಿದ್ದು, ಯುವ ಪೀಳಿಗೆಗೆ ವಚನ ಸಾಹಿತ್ಯದ ಪರಿಚಯ ಮಾಡಿಕೊಡಬೇಕು ಎಂದು ಬೀದರ್ ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಲಮಪ್ರಭು ನಾವದಗೆರೆ ಹೇಳಿದರು.
ಶಹಾಬಾದ್ ಬಸವ ಸಮಿತಿ (ಅಲ್ ಸ್ಟಾಮ್ ಕಾಲೋನಿ) ವತಿಯಿಂದ ಭಂಕೂರಿನ ಶಾಂತನಗರ ಬಸವ ಮಂಟಪದಲ್ಲಿ ಸೋಮವಾರ ನಡೆದ ಬಸವರಾಜ ವೆಂಕಟಾಪುರ ಶರಣರು ರಚಿಸಿದ ʼಶೂನ್ಯಲಿಂಗ ವಿವೇಚನೆʼ (ಫ.ಗು. ಹಳಕಟ್ಟಿ ಸಂಪಾದಿತ ವಚನಶಾಸ್ತ್ರ ಸಾರ ಭಾಗ-1ರ ವಚನ ವಿವೇಚನೆ ಭಾಗ-5) ಕೃತಿ ಬಿಡುಗಡೆ ಸಮಾರಂಭ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃತಿ ಕುರಿತು ಮಾತನಾಡಿದ ಬಸವ ಚಿಂತಕ ಡಾ. ಶಿವರಂಜನ ಸತ್ಯಂಪೇಟೆ, ವಚನಶಾಸ್ತ್ರ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಪಾದಿತ ವಚನಶಾಸ್ತ್ರ ಸಾರ ಮೊದಲ ಸಂಪುಟದ ವಚನಗಳನ್ನು ಸರಳ ಭಾಷೆಯಲ್ಲಿ ಅರ್ಥವತ್ತಾಗಿ ವಿಶ್ಲೇಷಿಸಿರುವ ಈ ಕೃತಿ ವಚನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ಎಂದರು. ವಚನಗಳ ಒಳಾರ್ಥವನ್ನು ಗ್ರಹಿಸಲು ನಿರಂತರ ಅಧ್ಯಯನ ಮತ್ತು ಅನುಭಾವ ಅಗತ್ಯ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕೃತಿ ಬಿಡುಗಡೆ ಮಾಡಿ ಮಾತನಾಡಿ, ವಚನಗಳು ಬದುಕಿಗೆ ಬೆಳಕು ನೀಡುವ ದಾರಿದೀಪಗಳಾಗಿವೆ. ಹಣಕ್ಕಿಂತ ಹೃದಯ ಶ್ರೀಮಂತಿಕೆ ಬೆಳೆಸುವ ಸಂದೇಶವನ್ನು ವಚನಗಳು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಕೂರ ಬಸವ ಸಮಿತಿ ಅಧ್ಯಕ್ಷ ಅಶೋಕ ವಿ. ಘೂಳಿ ವಹಿಸಿದ್ದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಆರ್.ಜಿ. ಶೆಟಗಾರ, ರಾಜೋಳ ಬಸವ ಭಾರತಿ ಯೋಗಧಾಮದ ಲೋಕೇಶ ಗುರೂಜಿ ಹಾಗೂ ಬಸವರಾಜ ವೆಂಕಟಾಪುರ ಶರಣರು ಸಾನ್ನಿಧ್ಯ ವಹಿಸಿದ್ದರು.
ಪಂಪಾಪತಿ ಮೇಟಿ ಕಾರ್ಯಕ್ರಮ ನಿರೂಪಿಸಿದರು. ಬಸವ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಎಸ್. ಪದ್ಮಾಜಿ ಸ್ವಾಗತಿಸಿದರು. ಎಚ್.ಬಿ. ತೀರ್ಥೆ ವಂದಿಸಿದರು. ರೇವಣಸಿದ್ದಪ್ಪ ಮುಸ್ತಾರಿ, ಕಂಟೆಪ್ಪ ಬಿರಾದಾರ, ಶಿವಪುತ್ರ ಕುಂಬಾರ, ಅಮೃತ ಮಾನಕರ್, ಶಿವಶರಣಪ್ಪ ಜಟ್ಟೂರಕರ, ಗುರುಲಿಂಗಪ್ಪ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಚನ ಸಮೂಹ ಸಂಸ್ಥೆಯ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ಪಾದನೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಯೋಜನೆ ರೂಪಿಸಲಾಗಿದ್ದು, ಅದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ.
-ಅಲ್ಲಮಪ್ರಭು ನಾವದಗೆರೆ, ಬೀದರ್






