ಕಲಬುರಗಿ | ಪ್ರತಿಭಟನಾ ವೇಳೆ ಅಧಿಕಾರಿಗಳ ಮುಖಕ್ಕೆ ಮಸಿ ಬಳಿದ ಪ್ರಕರಣ : 11 ಕರವೇ ಕಾರ್ಯಕರ್ತರ ಬಂಧನ

ಕಲಬುರಗಿ: ನಗರದ ಕಣ್ಣಿ ಮಾರುಕಟ್ಟೆ ವಾಣಿಜ್ಯ ಮಳಿಗೆಯ ಕನ್ನಡ ನಾಮಫಲಕವನ್ನು ತೆಗೆಯುತ್ತಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ, ಲೋಕೋಪಯೋಗಿ ಎಂಜಿನಿಯರ್ ಅಮೀನ್ ಮುಕ್ತಾರ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ.ಎಸ್.ಮಾಳಗಿ ಅವರ ಮುಖಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಪ್ಪು ಮಸಿ ಬಳಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸ್ಟೇಷನ್ ಬಝಾರ್ ಠಾಣೆಯಲ್ಲಿ 20ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಳಿಗೆಯ ಕನ್ನಡ ಫಲಕ ತೆರವುಗೊಳಿಸುತ್ತಿರುವುದನ್ನು ಗಮನಿಸಿದ ಕರವೇ ಕಾರ್ಯಕರ್ತರು ದಿಢೀರನೆ ಸ್ಥಳಕ್ಕೆ ಧಾವಿಸಿ, ಅಧಿಕಾರಿಗಳ ಮುಖಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂಘಟನೆಯ ಪ್ರಮುಖರಾದ ಆನಂದ ದೊಡ್ಡಮನಿ (32), ರವೀಂದ್ರ ಸರಡಗಿ (30), ರಾಜು ಮಠಪತಿ (25), ಪೃಥ್ವಿ (18), ಸಚಿನ್ ಲೋಕನಿ (25), ಶಾಹಿಲ ಚವ್ಹಾಣ್ (24), ಅಪ್ಪಾರಾವ ಕೆಟರಿ (38), ವಿಲಾಸ ರಾಠೋಡ (30), ಚೆನ್ನವೀರ ಬಿರಾದಾರ (24), ಪ್ರವೀಣ ಕಟ್ಟಿಮನಿ (35) ಮತ್ತು ಮೈತಾಬ್ ಲಾಡ್ಲೆಸಾಬ್ (53) ಅವರನ್ನು ಬಂಧಿಸಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







