ಕಲಬುರಗಿ | ಒಳ ಮೀಸಲಾತಿ ಸರ್ವೆಯಲ್ಲಿ ಲೋಪಗಳನ್ನು ಸರಿಪಡಿಸುವಂತೆ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹ

ಕಲಬುರಗಿ : ರಾಜ್ಯದಲ್ಲಿ ಒಳಮೀಸಲಾತಿ ಪರಿಶಿಷ್ಟ ಜಾತಿ, ಪಂಗಡಗಳ 101 ಜಾತಿಗಳ ಬಗ್ಗೆ ನಡೆಯುತ್ತಿರುವ ಸಮೀಕ್ಷೆಯಲ್ಲಿ ಹಲವು ಲೋಪಗಳು ಎದ್ದು ಕಾಣುತ್ತಿವೆ, ಅವುಗಳನ್ನು ಕೂಡಲೇ ಸರಿಪಡಿಸಬೇಕೆಂದು ಕಲಬುರಗಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸಮುದಾಯದ ಮುಖಂಡ ಲಿಂಗರಾಜ್ ತಾರಫೈಲ್, ಸರ್ವೇ ಮಾಡುವ ಕಾರ್ಯದಲ್ಲಿ ಶೇ.70ರಷ್ಟು ಇಂಟರ್ನೆಟ್ ಆನ್ಲೈನ್ ಸರ್ವರ್ ಡೌನ್ ಆಗುತ್ತಿದೆ, ಇದರಿಂದ ಗಣತಿ ಮಾಡಲು ಬಂದಿರುವವರ ಸಮಯ ವ್ಯರ್ಥವಾಗುತ್ತಿದೆ, ಗಣತಿಗೆ ಬಂದಂತಹ ಸಹಶಿಕ್ಷಕರಿಗೆ ಮತ್ತು ಬಿಎಲ್ ಓ ಗಳಿಗೆ ಸರಿಯಾದ ಹೊಂದಾಣಿಕೆ ಇರುವುದಿಲ್ಲ. ಇದರಿಂದ ಸಮೀಕ್ಷೆ ಬಹಳಷ್ಟು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಸಮೀಕ್ಷೆ ನಡೆಸಲು ಬರುವ ಶಿಕ್ಷಕರಿಗೆ ಸರಿಯಾಗಿ ಮೊಬೈಲ್ ಆಪ್ ಅನ್ನು ನಿರ್ವಹಿಸಲು ಆಗುತ್ತಿಲ್ಲ, ಮಹಿಳಾ ಸರ್ವೇಯರ್ ಬಳಿ ಮೊಬೈಲ್ ಇರದೆ ಇರುವುದರಿಂದ ಅವರು ಬೇರೆಯವರ ಮೊಬೈಲ್ ಬಳಸಿಕೊಳ್ಳುತ್ತಿದ್ದಾರೆ, ಇದರಿಂದ ಗಣತಿ ಕಾರ್ಯಕ್ಕೆ ಕುಂಠಿತ ಸಾಗಿದೆ ಎಂದರು.
ಮುಖಂಡ ಶ್ಯಾಮ್ ನಾಟಿಕರ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಜಗನ್ನಾಥ್ ಚಿಂತಪಲ್ಲಿ, ರಂಜಿತ್ ಮೂಲಿಮನಿ, ವಿಜಯಕುಮಾರ ಅಡಿಕೆ, ನಾಗರಾಜ್ ಗುಂಡಗೂರ್ತಿ ಸೇರಿದಂತೆ ಮತ್ತಿತರರು ಇದ್ದರು.