ಕಲಬುರಗಿ | ಸೋಷಿಯಲ್ ಮೀಡಿಯಾದ ಗುಂಗಿನಿಂದ ಹೊರ ಬನ್ನಿ: ನಟ ಪ್ರಕಾಶ್ ರಾಜ್

ಕಲಬುರಗಿ: ಇಂದಿನ ಯುವ ಸಮುದಾಯ ಸೋಷಿಯಲ್ ಮೀಡಿಯಾ ಎಂಬ ಗುಂಗಿನಿಂದ ಹೊರಬರಬೇಕಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಯುವ ಸಮುದಾಯಕ್ಕೆ ಕರೆ ನೀಡಿದರು.
ಶನಿವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ 2025-26ನೇ ಶೈಕ್ಷಣಿಕ ಸಾಲಿನ ಗುಲ್ಬರ್ಗಾ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವಕ್ಕೆ ಡೊಳ್ಳು ಬಾರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಲೈಕ್, ಡಿಸ್ಲೈಕ್ ನಿಂದ ಭವಿಷ್ಯ-ಬದುಕು ಕಟ್ಟಿಕೊಳ್ಳಲಾಗಲ್ಲ. ಕುಟುಂಬಸ್ಥರು, ನೆರ ಹೊರೆಯವರೊಂದಿಗೆ ಬೆರೆಯಿರಿ. ನಾವು ನಾವಾಗಿರೋಣ. ಆ ನಿಟ್ಟಿನಲ್ಲಿ ಸಾಗೋಣ ಎಂದರು.
ಯುವ ಜನೋತ್ಸವ ಕಾರ್ಯಕ್ರಮ ಒಳ್ಳೆಯ ಕವಿ, ನಟ, ಕಲಾವಿದನನ್ನು ಮಾಡಲು ಸಾಧ್ಯವಿಲ್ಲ. ಆದರೆ ಒಬ್ಬ ಪರಿಪಕ್ವತೆಯ ಮನುಷ್ಯನಾಗಿ ಮಾಡಬಹುದುದು. ಸರ್ವಾಂಗೀಣ ಅಭಿವೃದ್ಧಿಗೆ ವ್ಯಕ್ತಿತ್ವ ವಿಕಸನ ತುಂಬಾ ಅವಶ್ಯಕ. ಅದು ಇಂತಹ ಯುವಜನೋತ್ಸವದಲ್ಲಿ ಸರ್ವರೊಂದಿಗೆ ಬೆರೆಯುವಿಕೆಯಿಂದ ಸಿಗುತ್ತದೆ ಎಂಬುದನ್ನು ಮರೆಯದಿರಿ ಎಂದು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಇಂದು ಸುಳ್ಳಿನ ಮಾರುಕಟ್ಟೆಯ ಪ್ರಪಂಚದಲ್ಲಿ ನಾವಿದ್ದೇವೆ. ಬಡವ-ಶ್ರೀಮಂತನನ್ನು ಕೇವಲ “ಬ್ರಾಂಡ್” ಮೇಲೆ ಅಳೆಯಲಾಗುತ್ತಿದೆ. ಈ ದೇಶವನ್ನು ನೀವು ಮುಂದೆ ನಡೆಸಬೇಕಿದೆ. ಇಂತಹ ಅಂತೆ-ಕಂತೆ ಸುಳ್ಳಿನಿಂದ ಹೊರಬನ್ನಿ. ಇಂದು ರಾಜಕಾರಣ ಧರ್ಮದ ಮೇಲೆ ಸಾಗಿದ್ದು, ಇದು ತುಂಬಾ ಅಪಾಯಕಾರಿ. ದುಡಿಯುವ ವರ್ಗಕ್ಕೆ ಉದ್ಯೋಗಬೇಕು. ಬಸವಣ್ಣ, ಅಂಬೇಡ್ಕರ, ಗಾಂಧಿ ತತ್ವ ಪಾಲಿಸಿ ಸಂವಿಧಾನ ಪಾಲಿಸಿ ಎಂದು ಪ್ರಕಾಶ ರಾಜ್ ಮಾರ್ಮಿಕವಾಗಿ ನುಡಿದರು.
ಯುವಜನೋತ್ಸವನ್ನು ಆನಂದಿಸಿ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಅವರು, ಇಂದಿನಿಂದ ಮೂರು ದಿನಗಳ ಕಾಲ ಜ್ಞಾನಗಂಗಾ ಆವರಣದಲ್ಲಿ ಯುವ ಉತ್ಸವದಲ್ಲಿ ವಿದ್ಯಾರ್ಥಿಗಳ ಸ್ಫರ್ಧಾ ಮನೋಭಾವನೆಯಿಂದ ಭಾಗವಹಿಸುವ ಮೂಲಕ ಯುವ ಜನೋತ್ಸವವನ್ನು ಆನಂದಿಸಬೇಕು. ತಮ್ಮಲಿನ ಅಡಗಿರುವ ಪ್ರತಿಭೆ ಹೊರಹಾಕಲು ಇದು ಉತ್ತಮವಾಗಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಪರಸ್ಪರ ಕಲೆ, ಅಭಿನಯವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿ ಯುವ ಜನೋತ್ಸವದಲ್ಲಿ ಭಾಗಿಯಾದ ಸ್ಪರ್ಧಾಳುಗಳಿಗೆ ಶುಭ ಕೋರಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯ ಪ್ರೊ. ಕೆ. ಸಿದ್ದಪ್ಪ, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಅತಿಥಿ ಶಿಕ್ಷಕರು, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ಕುಲಸಚಿವ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ರಮೇಶ್ ಲಂಡನಕರ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ಮುನ್ನ ಜ್ಞಾನಗಂಗಾ ಆವರಣದಲ್ಲಿ ಪ್ರಾಣಿ ಶಾಸ್ತ್ರ ವಿಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.
ಯುವಜನೋತ್ಸವದ ಮೊದಲನೇ ದಿನವಾದ ಶನಿವಾರ ಡಾ.ಬಿ.ಆರ್. ಅಂಬೇಡ್ಕರ್ ಭವನದ ಮುಖ್ಯ ಸಭಾಂಗಣದಲ್ಲಿ ವೃಂದ ಗಾಯನ (ಭಾರತೀಯ), ವೃಂದಗಾಯನ (ಪಾಶ್ಚಿಮಾತ್ಯ.) ಪಾಶ್ಚಿಮಾತ್ಯ ಇನ್ ಸ್ಟ್ರುಮೆಂಟಲ್ ಸೋಲೋ ಹಾಗೂ ಏಕವ್ಯಕ್ತಿ ಸ್ವರಗಾಯನ (ಪಾಶ್ಚಿಮಾತ್ಯ) ಸ್ಪರ್ಧೆಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಭವನದ ಮೊದಲನೇ ಮಹಡಿಯಲ್ಲಿ ಕಾರ್ಟೂನಿಂಗ್ ಮತ್ತು ಕೋಲಾಜ್ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು.










