ಕಲಬುರಗಿ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : ಎನ್.ರವಿಕುಮಾರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಕಲಬುರಗಿ : ಮುಸ್ಲಿಂ ಮಹಿಳಾ ಅಧಿಕಾರಿಯನ್ನು ಗುರಿಯಾಗಿಸಿ ಕಲಬುರಗಿ ಜಿಲ್ಲಾಧಿಕಾರಿಗಳ ವಿರುದ್ಧ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿಕೆ ನೀಡಿರುವುದು ಖಂಡಿಸಿ, ಮುಸ್ಲಿಂ ಮಹಿಲೆಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ಎಂಎಲ್ಸಿ ರವಿಕುಮಾರ್ ಅವರ ಮಾನಹಾನಿಕರ ಮತ್ತು ಕೋಮು ಹೇಳಿಕೆಗಳನ್ನು ತಕ್ಷಣವೇ ಪರಿಗಣಿಸುವಂತೆ ರಾಷ್ಟ್ರ ಹಾಗೂ ರಾಜ್ಯದ ಮಹಿಳಾ ಆಯೋಗಕ್ಕೆ ಕಲಬುರಗಿಯ ಮಹಿಳೆಯರು ಮನವಿಯಲ್ಲಿ ' ಆಗ್ರಹಿಸಿದ್ದಾರೆ.
ಕಳೆದ ಮೇ 24ರಂದು ಕಲಬುರಗಿಯಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ಸಾರ್ವಜನಿಕ ಸಭೆಯ ಸಮಯದಲ್ಲಿ ಬಿಜೆಪಿ ಎಂಎಲ್ಸಿ ರವಿಕುಮಾರ್ ಅವರು ಯಾವುದೇ ಪುರಾವೆಗಳಿಲ್ಲದೆ, ಸಂಪೂರ್ಣವಾಗಿ ದ್ವೇಷ ಮತ್ತು ಪೂರ್ವಾಗ್ರಹದಿಂದ ಪಾಕಿಸ್ತಾನಿ ಎಂದು ಸಾರ್ವಜನಿಕವಾಗಿ ಜಿಲ್ಲಾಧಿಕಾರಿಯನ್ನು ಕರೆದಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇದು ಪ್ರತ್ಯೇಕ ಘಟನೆಯಲ್ಲ. ಇದೇ ರೀತಿಯ ಪ್ರಕರಣದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಕೂಡ ಸೇರಿದ್ದಾರೆ, ಅವರನ್ನು ಅನ್ಯಾಯವಾಗಿ ಸಾರ್ವಜನಿಕವಾಗಿ ಗುರಿಯಾಗಿಸಿಕೊಂಡು ಮಾನಹಾನಿ ಮಾಡಲಾಯಿತು.
ಜಿಲ್ಲಾಧಿಕಾರಿಗಳಾದ ಫೌಝಿಯಾ ತರನ್ನುಮ್ ಅವರ ವಿರುದ್ದ ಕೋಮುವಾದ ಮತ್ತು ಮಾನಹಾನಿಕರವಾಗಿ ಗುರಿಯಾಗಿಸಿಕೊಂಡು ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ರವಿಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಹೇನಾಜ್ ಅಖರ್, ಡಾ.ರಾಬಿಯಾ ಖಾನಮ್, ಡಾ.ರಯಿಸಾ ಫಾತೀಮಾ, ವಾಜೀದಾ ಮುಬೀನ್, ಸಬೀರಾ ಬೇಗಂ, ಜನಮಾ ಬೇಗಂ, ಆಯಿಶಾ ಬೇಗಂ, ನಿಕ್ಕತ್ ಬೇಗಂ, ರೂಹಿ, ಆಯಿಶಾ ಬೇಗಂ, ಮೊಹ್ಮದಿ, ಮುಂಬಿ, ಆಯಿಶಾ, ಬಿಸ್ಮಿಲ್ಲಾ ಸೇರಿದಂತೆ ಇನ್ನಿತರರಿದ್ದರು.







