Kalaburagi | ಸಂತ ಶ್ರೀ ಸೇವಾಲಾಲ ಮಹಾರಾಜರ ಮೂರ್ತಿ ತೆರವಿಗೆ ಖಂಡನೆ

ಕಲಬುರಗಿ: ಕಲಬುರಗಿ ತಾಲೂಕಿನ ನಂದೂರ ಗ್ರಾಮದ ಬಾಪು ನಾಯಕ ಹಾಗೂ ಕಾನು ನಾಯಕ ತಾಂಡಾಕ್ಕೆ ಸಂಪರ್ಕಿಸುವ ರಸ್ತೆಯಲ್ಲಿದ್ದ ಬಂಜಾರ ಸಮುದಾಯದ ಆರಾಧ್ಯ ದೈವ ಹಾಗೂ ಕುಲಗುರು ಸಂತ ಶ್ರೀ ಸೇವಾಲಾಲ ಮಹಾರಾಜರ ಮೂರ್ತಿಯನ್ನು ಯಾವುದೇ ಪೂರ್ವ ಸೂಚನೆ ನೀಡದೆ ಜುಲೈ 6ರಂದು ರಾತ್ರಿ ತೆರವುಗೊಳಿಸಿರುವ ಕ್ರಮವನ್ನು ಖಂಡಿಸಿ, ಬಂಜಾರಾ (ಲಂಬಾಣಿ) ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಸ್ತೆ ಕಾಮಗಾರಿಯ ಹೆಸರಿನಲ್ಲಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಮೂರ್ತಿಯನ್ನು ತೆರವುಗೊಳಿಸಿರುವುದು ಖಂಡನೀಯ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಶಹಾಬಾದ್ ಮುಖ್ಯ ರಸ್ತೆಯಿಂದ ಬಾಪು ನಾಯಕ ತಾಂಡಾಕ್ಕೆ ಸಂಪರ್ಕಿಸುವ ಸುಮಾರು ಮೂರು ಕಿಲೋಮೀಟರ್ ರಸ್ತೆ ಕಾಮಗಾರಿಗೆ ಸರ್ಕಾರ ಸುಮಾರು 10 ಕೋಟಿ ರೂ. ಅನುದಾನ ನೀಡಿದ್ದರೂ, ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದು ಮುಖಂಡರು ಆರೋಪಿಸಿದರು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರ್ಕಾರಿ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಅನುಮಾನವಿದ್ದು, ಕಾಮಗಾರಿಯ ಗುಣಮಟ್ಟದ ಕುರಿತು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮೂರ್ತಿ ತೆರವುಗೊಳಿಸಿದವರ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ರಸ್ತೆ ಕಾಮಗಾರಿ ಗುತ್ತಿಗೆದಾರರ ಪರವಾನಗಿಯನ್ನು ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಬೇಕು. ಕಳಪೆ ಕಾಮಗಾರಿ ಕುರಿತು ತನಿಖಾಧಿಕಾರಿಗಳನ್ನು ನೇಮಿಸಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ ಬಂಜಾರ ಮಹಾಸಭಾ ಜಿಲ್ಲಾಧ್ಯಕ್ಷ ಸಂತೋಷ ಆಡ, ಲಂಬಾಣಿ–ಕೊರಚ–ಕೊರಮ–ಭೋವಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಪವಾರ, ಶ್ರೀ ಸೇವಾಲಾಲ ಜಯಂತೋತ್ಸವ ಸಮಿತಿ ಅಧ್ಯಕ್ಷ ರಾಜು ಪವಾರ, ಜಿಲ್ಲಾ ಗೌರವಾಧ್ಯಕ್ಷ ಶ್ರೀಮಂತ ಪವಾರ, ಹಣಮಂತ ಪವಾರ (ಉದನೂರ), ತಾಲೂಕು ಅಧ್ಯಕ್ಷ ಆಕಾಶ ರಾಠೋಡ, ಬಿ.ಬಿ. ನಾಯಕ, ಮಹೇಶ ಚವ್ಹಾಣ, ಆನಂದ ಚವ್ಹಾಣ, ಕೃಷ್ಣ ನಾಯಕ, ಶ್ರೀಧರ ಚವ್ಹಾಣ, ಚಂದು ಜಾಧವ, ಸಂತೋಷ ರಾಠೋಡ, ದತ್ತು ಜಾಧವ, ಸುನೀಲ ರಾಠೋಡ, ಅಮಿತ ರಾಠೋಡ, ಲಾಲಪ್ಪ ರಾಠೋಡ, ಯುವರಾಜ ರಾಠೋಡ, ಶಂಕರ ಜಾಧವ ಸೇರಿದಂತೆ ಬಂಜಾರಾ (ಲಂಬಾಣಿ) ಸಮನ್ವಯ ಸಮಿತಿಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.






