Kalaburagi | ಕಾರ್ಮಿಕ ಸಂಹಿತೆ, ಕ್ಷೇತ್ರ ಮರುವಿಂಗಡಣೆ ವಿರುದ್ಧ ಸಿಪಿಎಂ ಆಕ್ರೋಶ

ಕಲಬುರಗಿ: ಮೇ 10 ಮತ್ತು 11ರಂದು ನವದೆಹಲಿಯಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಪೊಲಿಟ್ ಬ್ಯೂರೋ ಸಭೆಯಲ್ಲಿ ಕೇಂದ್ರ ಸರ್ಕಾರದ ಹಲವು ನೀತಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇರಳದಲ್ಲಿ ಎಲ್ಡಿಎಫ್ಗೆ ಹಿನ್ನಡೆ ಉಂಟಾಗಿರುವುದನ್ನು ಪೊಲಿಟ್ ಬ್ಯೂರೋ ಒಪ್ಪಿಕೊಂಡಿದ್ದು, ಮೊದಲ ಬಾರಿಗೆ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿರುವುದನ್ನು ಗಂಭೀರ ಬೆಳವಣಿಗೆ ಎಂದು ಹೇಳಿದೆ. ಕಾಂಗ್ರೆಸ್ನ ಮೃದು ಕೋಮುವಾದಿ ಧೋರಣೆ ಹಾಗೂ ಸಿಪಿಐ(ಎಂ) ವಿರುದ್ಧದ ಸುಳ್ಳು ಪ್ರಚಾರವೇ ಬಿಜೆಪಿಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಆರೋಪಿಸಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವು ಹಣದ ದುರುಪಯೋಗ ಮತ್ತು ಕೇಂದ್ರೀಯ ಸಂಸ್ಥೆಗಳ ಹಸ್ತಕ್ಷೇಪದ ಫಲ ಎಂದು ಟೀಕಿಸಿರುವ ಪಕ್ಷ, ಎಸ್ಐಆರ್ ಪ್ರಕ್ರಿಯೆಯಿಂದ ಸುಮಾರು 27 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದೆ.
ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿ ನೀಡಿರುವ “ಮಿತವ್ಯಯ” ಕರೆಗೆ ವಿರೋಧ ವ್ಯಕ್ತಪಡಿಸಿರುವ ಸಿಪಿಐ(ಎಂ), ಇರಾನ್ ಮೇಲಿನ ದಾಳಿಗಳನ್ನು ಖಂಡಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದೆ. ರೈತರಿಗೆ ಅಗತ್ಯ ರಸಗೊಬ್ಬರ ಒದಗಿಸದಿದ್ದರೆ ಆಹಾರ ಉತ್ಪಾದನೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದೆ.
ಕಾರ್ಮಿಕ ಸಂಹಿತೆಗಳನ್ನು ಚುನಾವಣೆ ಬಳಿಕ ಜಾರಿಗೆ ತಂದಿರುವುದನ್ನು “ವಂಚಕ ರಾಜಕೀಯ” ಎಂದು ಆರೋಪಿಸಿರುವ ಪಕ್ಷ, ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾದ ನೀತಿಗಳನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಹೇಳಿದೆ.
ಕ್ಷೇತ್ರ ಮರುವಿಂಗಡಣೆಯೊಂದಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಜೋಡಿಸುವ ಮೂಲಕ ಬಿಜೆಪಿ ಚುನಾವಣಾ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಸಿಪಿಐ(ಎಂ), ಮುಂದಿನ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂದು ಆಗ್ರಹಿಸಿದೆ.
ಕ್ಯೂಬಾ ವಿರುದ್ಧ ಅಮೆರಿಕದ ನಿರ್ಬಂಧಗಳನ್ನು ಖಂಡಿಸಿರುವ ಪೊಲಿಟ್ ಬ್ಯೂರೋ, ಭಾರತದ ವಿದೇಶಾಂಗ ನೀತಿ ಅಮೆರಿಕ ಪರವಾಗಿದೆ ಎಂದು ಟೀಕಿಸಿದೆ.






