ಕಲಬುರಗಿ | ಅ.10ರೊಳಗೆ ರೈತರೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಸಕ್ಕರೆ ಕಾರ್ಖಾನೆಗಳಿಗೆ ಡಿಸಿ ಬಿ.ಫೌಝಿಯಾ ಸೂಚನೆ

ಕಲಬುರಗಿ : ಪ್ರಸಕ್ತ 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ನ.1 ರಿಂದ ಕಟಾವು ಪ್ರಕ್ರಿಯೆ ನಡೆಸಲಾಗುತ್ತಿದ್ದು, ರೈತರಿಂದ ಕಬ್ಬು ಖರೀದಿ ಮುನ್ನ ಪ್ರತಿ ಟನ್ಗೆ ನೀಡಲಾಗುವ ದರ, ಸಾಗಾಣಿಕೆ ವೆಚ್ಚ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಅ.10 ರೊಳಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಡಿಸಿ ಬಿ.ಫೌಝಿಯಾ ತರನ್ನುಮ್ ಸೂಚನೆ ನೀಡಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಕಬ್ಬು ಬೆಳೆಗಾರರು ಮತ್ತು ರೈತ ಸಂಘದ ಮುಖಂಡರುಗಳ ಅಹವಾಲು ಆಲಿಸಿ ಮಾತನಾಡಿದ ಅವರು, ಎಲ್ಲಾ ರೈತರಿಂದ ಸಾಧ್ಯವಾಗದಿದ್ದರೂ, ಕನಿಷ್ಠ ಪಕ್ಷ ಆಸಕ್ತ ರೈತರಿಂದ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡೆ ರೈತರಿಂದ ಕಬ್ಬು ಖರೀದಿ ಮಾಡಬೇಕೆಂದು ಡಿಸಿ ಸೂಚನೆ ನೀಡಿದರು.
ದ್ವಿಪಕ್ಷಿಯ ಒಪ್ಪಂದದ ಜೊತೆಗೆ ಸಾಧ್ಯವಾದರೆ ಕಬ್ಬು ತಂತ್ರಾಂಶ ಆಪ್ ಸಹ ಅಳವಡಿಸಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಗಳು ಕಬ್ಬು ಪಡೆದ ನಂತರ ರೈತರಿಗೆ 15 ದಿನದಲ್ಲೆ ಹಣ ಪಾವತಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಸಹಿಸುವುದಿಲ್ಲ. ವಿಳಂಬವಾದಲ್ಲಿ ನಿಯಮದಂತೆ ಶೇ.15ರಷ್ಟು ಬಡ್ಡಿ ರೈತರಿಗೆ ಕಾರ್ಖಾನೆ ಪಾವತಿಸಬೇಕಾಗುತ್ತದೆ ಎಂದ ಅವರು, ಎಲ್ಲಾ ಕಾರ್ಖಾನೆಗಳು ಕಬ್ಬು ಕಟಾವು ಮತ್ತು ಸಾರಿಗೆ ವೆಚ್ಚವನ್ನು ಒಂದೇ ದರ ನಿಗದಿಪಡಿಸಬೇಕು ಎಂದರು.
ಕಬ್ಬು ಕಾರ್ಖಾನೆಗೆ ತಂದು ಕೂಡಲೆ ಡಿಜಿಟಲ್ ತೂಕದ ಯಂತ್ರದ ಮೂಲಕ ತೂಕ ಮಾಡಿದ ನಂತರವೇ ಕಾರ್ಖಾನೆಯೊಳಗೆ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ತೂಕದಲ್ಲಿ ರೈತರಿಗೆ ಮೋಸ ಮಾಡಬಾರದು. ಕಬ್ಬು ಕಟಾವಿಗೆ ಮುನ್ನ ಗ್ರಾಮ ಪಂಚಾಯತ್ ವಾರು ಮಾಹಿತಿ ನೀಡಬೇಕು. ಸಂಪೂರ್ಣ ಬಲಿತ ಕಬ್ಬು ಮಾತ್ರ ಕಟಾವು ಮಾಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಕಾರಣಕ್ಕೂ ಮದ್ಯವರ್ತಿಗಳಿಗೆ ಕಂಪನಿಗಳು ಮಣೆ ಹಾಕಬಾರದೆಂದು ಕಾರ್ಖಾನೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಕಬ್ಬು ತೂಕದಲ್ಲಿ ಕಾರ್ಖಾನೆಯಿಂದ ಮೋಸವಾಗುತ್ತಿದೆ ಎಂಬ ರೈತ ಮುಖಂಡರ ಅಭಿಪ್ರಾಯದ ಹಿನ್ನೆಲೆಯಲ್ಲಿ ಡಿಸಿ ಮಾತನಾಡಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಆಗಾಗ ಸಕ್ಕರೆ ಕಾರ್ಖಾನೆಗಳಿಗೆ ಹಠಾತ್ ಭೇಟಿ ನೀಡಿ ತಪಾಸಣೆ ಮಾಡಬೇಕು. ಆಹಾರ ಇಲಾಖೆ ಅಧಿಕಾರಿಗಳು ಇಳುವರಿ ಕುರಿತು ಕಾರ್ಖಾನೆವಾರು ನಿಯಮಿತವಾಗಿ ತಪಾಸಣೆ ನಡೆಸಬೇಕು. ಜೆಸ್ಕಾಂನವರು ವಿದ್ಯುತ್ ಅವಘಡದಿಂದ ಬೆಳೆ ಹಾನಿಯಾಗದಂತೆ ನಿಯಂತ್ರಣ ಕ್ರಮ ವಹಿಸಬೇಕು. ಇನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾರ್ಖಾನೆ ಸುತ್ತ 5 ಕಿ.ಮೀ ಪ್ರದೇಶದಲ್ಲಿ ವಾಯು, ಶಬ್ದ, ನೀರು ಮಾಲಿನ್ಯ ಆಗದಂತೆ ಕಾರ್ಖಾನೆಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಬ್ಬು ಮಾರಾಟಕ್ಕೆ ಕೆಲವೊಮ್ಮೆ ರೈತ ತನ್ನ ಮಡದಿ, ಮಕ್ಕಳೊಂದಿಗೆ ಕಬ್ಬು ಕಟಾವು ಮಾಡಿಕೊಂಡು ಕಾರ್ಖಾನೆಗೆ ತೆಗೆದುಕೊಂಡು ಬಂದಾಗ ಅಲ್ಲಿಯೆ 4-5 ಗಂಟೆ, ಕೆಲವೊಮ್ಮೆ ರಾತ್ರಿಯು ಕಳೆಯಬೇಕಾಗುತ್ತದೆ. ಕಾರ್ಖಾನೆಯಲ್ಲಿ ರಾತ್ರಿ ಕಳೆಯಲು ಸೂಕ್ತ ಶೆಡ್, ಕಾರ್ಖಾನೆ ಸಮೀಪ ಲಘು ಉಪಹಾರಕ್ಕಾಗಿ ಕ್ಯಾಂಟಿನ್ ತೆರೆಯಬೇಕು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಕಾರ್ಖಾನೆಯ ಜವಾಬ್ದಾರಿಯಾಗಿದೆ ಎಂದು ಡಿಸಿ ಬಿ.ಫೌಝಿಯಾ ತರನ್ನುಮ್ ತಿಳಿಸಿದರು.
ರೈತರ ಬೇಡಿಕೆಗಳೇನು? :
ಕೇಂದ್ರ ಸರ್ಕಾರ ರೂಪಿಸಿರುವ ಎಫ್.ಆರ್.ಪಿ. ದರ ಅವೈಜ್ಞಾನಿಕವಾಗಿದ್ದು, ಇದನ್ನು ಪುನರ್ ಪರಿಶೀಲಿಸಬೇಕು. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಮೆಟ್ರಿಕ್ ಟನ್ಗೆ 500 ರೂ. ಪರಿಹಾರ ಘೋಷಿಸಬೇಕು. ಕಾರ್ಖಾನೆಯು 15 ದಿನಗಳಲ್ಲಿ ಕಬ್ಬಿನ ಹಣ ಪಾವತಿ ಮಾಡದಿದ್ದಲ್ಲಿ ಬಡ್ಡಿ ಮೊತ್ತ ನೇರವಾಗಿ ರೈತರ ಖಾತೆಗೆ ಜಮೆಯಾಗುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು, ಬಾಕಿ ಹಣ ಕೂಡಲೆ ಪಾವತಿಸಬೇಕು, ಕಬ್ಬು ಕಟಾವಿನಲ್ಲಿ ತಾರತಮ್ಯ ಮಾಡಬಾರದು ಮತ್ತು ನಿಗದಿಯಂತೆ ಸರಿಯಾದ ಸಮಯಕ್ಕೆ ಕಟಾವು ಮಾಡಬೇಕು, ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆ ಗೇಟ್ ಬಳಿ ತೂಕ ಮಾಡಿಯೇ ಕಬ್ಬು ತೆಗೆದುಕೊಳ್ಳಬೇಕು, ಹಣ ಪಾವತಿ ಮತ್ತು ಬಾಕಿ ಕುರಿತು ಎಸ್.ಎಂ.ಎಸ್ ಕಳುಹಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಡಿಸಿ ಮತ್ತು ಕಾರ್ಖಾನೆ ಪ್ರತಿನಿಧಿಗಳ ಮುಂದೆ ರೈತ ಮುಖಂಡರು ಬೇಡಿಕೆ ಇಟ್ಟರು.
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಭೀಮರಾವ ಮಾತನಾಡಿ, ಪ್ರಸಕ್ತ 2025-26ನೇ ಸಾಲಿಗೆ ರೈತರಿಂದ ಕಬ್ಬು ಪಡೆಯುವ ಕಲಬುರಗಿ ಜಿಲ್ಲೆಯ ಕೆ.ಪಿ.ಆರ್ ಶುರ್ಸ್ & ಅಪ್ಪಾರೆಲ್ಸ್ ಲಿ. ಕಾರ್ಖಾನೆಯು ಪ್ರತಿ ಮೆ.ಟನ್ ಕಬ್ಬಿಗೆ 3,512 ರೂ., ಎನ್.ಎಸ್.ಎಲ್. ಶುಗರ್ ಕಾರ್ಖಾನೆಯು 3,515 ರೂ., ಶ್ರೀ ರೇಣುಕಾ ಶುರ್ಸ್ ಲಿ. ಕಾರ್ಖಾನೆಯು 3,325 ರೂ., ದಿ.ಉಗಾರ್ ಶುಗರ್ ವರ್ಕ್ಸ್ ಲಿ. ಕಾರ್ಖಾನೆಯು 3,291 ರೂ., ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ಕಾರ್ಖಾನೆಯು 3,519 ರೂ. ಹಾಗೂ ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಶುಗರ್ & ಪ್ಯುಯೆಲ್ಸಸ್ ಪ್ರೈ.ಲಿ. ಕಾರ್ಖಾನೆಯು 3,436 ರೂ. ರೈತರಿಗೆ ಪಾವತಿಸುವಂತೆ ಸರ್ಕಾರ ಎಫ್.ಆರ್.ಪಿ. ದರ ನಿಗದಿ ಮಾಡಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಝೀಮ್, ಉಪ ಕೃಷಿ ನಿರ್ದೇಶಕ ಸೋಮಶೇಖರ ಬಿರಾದರ, ಅಫಜಲಪೂರ ತಹಶೀಲ್ದಾರ ಸಂಜೀವಕುಮಾರ ದಾಸರ್, ಯಡ್ರಾಮಿ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಸೇರಿದಂತೆ 6 ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳು, ಅನೇಕ ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.







