ʼಪ್ರಜಾ ಸೇವೆʼ ಸಭೆಯ ಅಂತಿಮ ಸಿದ್ದತೆ ವೀಕ್ಷಿಸಿದ ಕಲಬುರಗಿ ಡಿಸಿ ಇಕ್ರಮ್ ಶರೀಫ್

ಕಲಬುರಗಿ: ರಾಜ್ಯದ ಜನತೆಯ ಕುಂದುಕೊರತೆಗಳನ್ನು ಮತ್ತು ಅಹವಾಲುಗಳನ್ನು ಆಲಿಸಿ ಸ್ಥಳದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ "ಪ್ರಜಾ ಸೇವೆ" ಆಂದೋಲನಾ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅದ್ಯಕ್ಷತೆಯಲ್ಲಿ ಶನಿವಾರ ನಡೆಯಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಕಮಲಾಪೂರ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಅಂತಿಮ ಸಿದ್ದತಾ ಕಾರ್ಯ ವೀಕ್ಷಿಸಿದರು.
ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಒ ರಾಹುಲ್ ಸಂಕನೂರು ಅವರೊಂದಿಗೆ ವೇದಿಕೆ ಕಾರ್ಯಕ್ರಮ ಸ್ಥಳ, ಪಾರ್ಕಿಂಗ್, ಊಟದ ಸ್ಥಳ ವೀಕ್ಷಿಸಿದ ಅವರು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರುವಂತೆ ಈಗಾಗಲೆ ವಿವಿಧ ಸಮಿತಿಗಳನ್ನು ರಚಿಸಿದ್ದು, ಆಯಾ ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿಯಂತೆ ಎಲ್ಲಾ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಅಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾದಿಕಾರಿಗಳು, ತಾಲೂಕಿನ ವಿವಿದಡೆಯಿಂದ ಆಗಮಿಸುವ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು, ಊಟ, ಮೊಬೈಲ್ ಟಾಯಲೆಟ್ ವ್ಯವಸ್ಥೆ ಮಾಡಬೇಕು. ಅಸನದ ವ್ಯವಸ್ಥೆ, ಶಾಮಿಯಾನ ಹಾಕಬೇಕು. ಗಣ್ಯರ, ಅಧಿಕಾರಿಗಳ, ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಭದ್ರತೆ ಕಲ್ಪಿಸಬೇಕು. ಕಾರ್ಯಕ್ರಮಕ್ಕೆ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕೆಂದರಲ್ಲದೆ ಮುಂಜಾಗ್ರತವಾಗಿ ಅಂಬುಲೆನ್ಸ್ ವಾಹನ, ಅಗ್ನಿಶಾಮಕ ವಾಹನ ಸ್ಥಳದಲ್ಲಿ ತೈನಾತಿಸಬೇಕೆಂದು ಡಿ.ಸಿ. ಸೂಚಿಸಿದರು.
ಇನ್ನು ಸಾರ್ವಜನಿಕರ ಊಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಜನಸಂಖ್ಯೆ ಅನುಗುಣವಾಗಿ ಕೌಂಟರ್ ಸ್ಥಾಪಿಸಬೇಕು. ಕಾಲೇಜು ಆವರಣ ಸಂಪೂರ್ಣ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.
ಪಂಚಾಯತಿವಾರು ಸ್ಟಾಲ್ ಸ್ಥಾಪಿಸಿ:
ತಾಲೂಕಿನ 19 ಗ್ರಾಮ ಪಂಚಾಯತಿವಾರು ಕೌಂಟರ್ ಸ್ಥಾಪಿಸಬೇಕು. ಇದಲ್ಲದೆ ಪ್ರಮುಖವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಪಟ್ಟಣ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೀಡ್ ಬ್ಯಾಂಕ್, ಎಸ್.ಐ.ಆರ್., ವಿಬಿ-ಜಿ-ರಾಮ್ ಜಿ, ಭಾರತ ಜೋಡೊ ಯುವ ಸಂಘ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ, ಆಹಾರ, ಜೆಸ್ಕಾಂ, ಯುವ ನಿಧಿ, ಸಹಕಾರ ಸೇರಿದಂತೆ ಹೀಗೆ 20 ಪ್ರಮುಖ ಇಲಾಖೆಗಳು ಸಹ ಸ್ಟಾಲ್ ಹಾಕಿ ಇಲಾಖೆ ಯೋಜನೆಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು. ಸಹಾಯವಾಣಿ ಸ್ಟಾಲ್ ಸಹ ಸ್ಥಾಪಿಸುವುದು. ಇನ್ನು ಪ್ರತಿ ಸ್ಟಾಲ್ ನಲ್ಲಿ ಕಂಪ್ಯೂಟರ್ ಅಪರೇಟರ್, ಸಿಬ್ಬಂದಿ ನಿಯೋಜಿಸಬೇಕು. ಇಂಟರನೆಟ್, ವಿದ್ಯುತ್ ವ್ಯವಸ್ಥೆ ಇರುವಂತೆಯೂ ನೋಡಿಕೊಳ್ಳಬೇಕೆಂದರು.
ಪ್ರಜಾ ಸೇವೆ ಸಭೆಯಲ್ಲಿ ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ದೂರು, ಅರ್ಜಿ ತೆಗೆದುಕೊಂಡು ಸಚಿವರ ಮುಂದೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕಮಲಾಪುರ ತಾಲೂಕಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸಭೆಯಲ್ಲಿ ಹಾಜರಿರಬೇಕು. ಸಚಿವರು ಏನೇ ಪ್ರಶ್ನೆ ಕೇಳಿದರೆ ಸ್ಥಳದಲ್ಲಿಯೆ ಉತ್ತರ ನೀಡಬೇಕು. ಉತ್ತರ ನೀಡಲು ತಡಬಡಾಯಿಸಿ ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಂಡಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಡಿ.ಸಿ. ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಮಲಾಪೂರ ತಹಶೀಲ್ದಾರ ಮೊಹಮ್ಮದ ಮೋಹಸೀನ್, ತಾಲೂಕಾ ಪಂಚಾಯತ್ ಇ.ಓ. ರಮೇಶ ಪಾಟೀಲ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅನೇಕ ಅಧಿಕಾರಿಗಳು ಮತ್ತು ಕಾರ್ಯಕ್ರಮಕ್ಕೆ ನಿಯೋಜಿಸಿದ ಅಧಿಕಾರಿಗಳಿದ್ದರು.






