ಕಲಬುರಗಿ | ಸೆಪ್ಟೆಂಬರ್ನಲ್ಲಿ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ

ಕಲಬುರಗಿ : 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೆಳನವನ್ನು ಬರುವ ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದಲ್ಲಿ ನಡೆಸಲು ತಾಲೂಕು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಶಿವಲೀಲಾ ಎಸ್ ಕಲಗುರ್ಕಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ನಡೆಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅರ್ಥಪೂರ್ಣ ಸಮ್ಮೇಳನವನ್ನು ನಡೆಸಲು ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ವೈವಿಧ್ಯಮಯ ಸಮ್ಮೇಳನ ನಡೆಸಲೂ ಕೂಡ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಮ್ಮೇಳನ ಕೇವಲ ಸಾಂಕೇತಿಕವಾಗಿರದೇ ಈ ನೆಲ-ಜಲ, ಭಾಷೆ ಮತ್ತು ಸಂಸ್ಕೃತಿಯ ಕುರಿತು ಚಿಂಥನ ಮಂಥನ ನಡೆಸುವಂತಾಗುವ ನಿಟ್ಟಿನಲ್ಲಿ ಸಮ್ಮೇಳನ ರೂಪಿಸಲಾಗುತ್ತಿದೆ. ಇಂದಿನ ಜಾಗತೀಕರಣದ ಪರಿಣಾಮ ನಮ್ಮ ಭಾಷೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಕನ್ನಡ ಭಾಷೆ ಕಟ್ಟುವುದು ಮತ್ತು ಅದನ್ನು ಸದೃಢಗೊಳಿಸುವತ್ತ ವಿಶೇಷ ಗಮನ ಕೊಡಬೇಕಿದೆ. ಈ ದಿಸೆಯಲ್ಲಿ ನಮ್ಮ ಸಮ್ಮೇಳನ ಅದಕ್ಕೆ ಪ್ರೇರಣೆ ಕೊಡಲಿದೆ ಎಂದು ಆಶಾಭಾವನೆ ಹೊಂದಲಾಗಿದೆ ಎಂದು ತಾಲೂಕಾಧ್ಯಕ್ಷ ಶಿವಲೀಲಾ ಕಲಗುರ್ಕಿ ಅವರು ವಿವರಿಸಿದರು.
ಸಭೆಯ ನೇತೃತ್ವ ವಹಿಸಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿದರು.
ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಡಾ.ಬಿ.ಎ.ಪಾಟೀಲ, ತಾಲೂಕು ಘಟಕದ ಪದಾಧಿಕಾರಿಗಳಾದ ವಿಶಾಲಾಕ್ಷಿ ಮಾಯಣ್ಣನವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ಪ್ರಭವ ಪಟ್ಟಣಕರ್, ಈರಣ್ಣ ಸೋನಾರ, ಸುನೀತಾ ಮಾಳಗಿ, ಚಂದ್ರಕಾoತ ಸೂರನ್, ಶರಣು ಹಾಗರಗುಂಡಗಿ, ಕುಶಾಲ ಧರ್ಗಿ, ಕವಿತಾ ಕಾವಳೆ, ರೇವಯ್ಯಾ ಸ್ವಾಮಿ ಸರಡಗಿ, ಲಲೀತಾ, ಭಾಗ್ಯಶ್ರೀ ಮರಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







