ಕಲಬುರಗಿ | ಸೌಜನ್ಯ, ಅಸಹಜ ಸಾವು ಪ್ರಕರಣಗಳ ಸಮಗ್ರ ತನಿಖೆಗೆ ಆಗ್ರಹ

ಕಲಬುರಗಿ: ಅತ್ಯಾಚಾರವಾಗಿ ಕೊಲೆಯಾಗಿರುವ 17 ವರ್ಷದ ಸೌಜನ್ಯ ಸೇರಿದಂತೆ ಧರ್ಮಸ್ಥಳದಲ್ಲಿ ಆಗಿರುವಂತಹ ಅನೇಕ ಅಸಹಜ ಸಾವುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರವಾಗಿ ಕೊಲೆಯಾಗಿ 13 ವರ್ಷಗಳೇ ಕಳೆದುಹೋದರೂ ಇಲ್ಲಿಯವರೆಗೆ ನೈಜ ಆರೋಪಿಗಳನ್ನು ಉದ್ದೇಶಪೂರ್ವಕವಾಗಿ ರಕ್ಷಿಸುತ್ತಿರುವುದು ಸರ್ಕಾರದ ಬಣ್ಣ ಬಯಲಾಗಿದೆ. ಈ ಹಿಂದೆ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ವಿಶೇಷ ಕೋರ್ಟ್ ವಿಚಾರಣೆ ನಡೆಸಿದ ಬಳಿಕ ಆರೋಪಿ ಎಂದು ಹೇಳಲಾಗುತ್ತಿದ್ದ ಸಂತೋಷ್ ರಾವ್ ಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನೈಜ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಹೇಳಿತ್ತು. ಹಾಗಾಗಿ ಈ ಪ್ರಕರಣವನ್ನು ಸೂಕ್ತ ತನಿಖೆಗೆ ಒಳಪಡಿಸಿ, ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಜೆಪಿ ಹಾಗೂ ಪಟ್ಟಭದ್ರ ಶಕ್ತಿಗಳು ಎಸ್ಐಟಿ ತನಿಖೆಯನ್ನು ಸ್ಥಗಿತಗೊಳಿಸಲು ಪ್ರಯತ್ನ ನಡೆಸಿದ್ದು, ದೂರುದಾರರನ್ನು, ಸಾಕ್ಷಿದಾರರನ್ನು ಬೆದರಿಸಿ, ತೇಜೋವಧೆ ನಡೆಸಿ, ಪ್ರಕರಣವನ್ನು ಹಿಮ್ಮೆಟ್ಟಿಸುವಂತಹ ಷಡ್ಯಂತ್ರ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಸಹಜ ಪ್ರಕರಣಗಳನ್ನು ಯಾವುದೇ ಲೋಪವಿಲ್ಲದೆ ತನಿಖೆ ನಡೆಸಿ, ನ್ಯಾಯ ಕೊಡಿಸುವ ಕೆಲಸ ಮಾಡಬೇಕೆಂದು ಎಂದು ಹೋರಾಟಗಾರ್ತಿ ಕೆ.ನೀಲಾ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಡಾ.ಪ್ರಭು ಖಾನಾಪುರೆ, ಲವಿತ್ರ ವಸ್ತ್ರದ್, ಪದ್ಮಾ ಮಾಲಿಪಾಟೀಲ್, ವಿದ್ಯಾ, ಸರ್ವೇಶ್, ಕೋದಂಡರಾಮ, ಪುಟ್ಟಮ್ಮ ಬಳ್ಳಾರಿ, ಪದ್ಮಿನಿ ಕಿರಣಗಿ, ಸುಜಾತಾ ವೈ., ಇಮಾಮ್ ಸೇರಿದಂತೆ ಮತ್ತಿತರರು ಇದ್ದರು.







