ಕಲಬುರಗಿ | ಬೆಣ್ಣೆತೋರಾ ಡ್ಯಾಮ್ ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಹಕ್ಕು ಪತ್ರ ವಿತರಣೆಗೆ ಆಗ್ರಹ

ಕಲಬುರಗಿ: ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಬೆಣ್ಣೆತೋರಾ ಡ್ಯಾಮ್ ಮುಳುಗಡೆ ಪ್ರದೇಶದ ಮನೆ ಕಳೆದುಕೊಂಡವರಿಗೆ ಮನೆ ಜಾಗ ಹಂಚಿಕೆ ಮಾಡಿ ಮನೆ ನಿವೇಶನ ಹಕ್ಕು ಪತ್ರ ವಿತರಣೆಯಲ್ಲಿ ತಾರತಮ್ಯ ಆಗಿರುವುದನ್ನು ಸರಿಪಡಿಸಿ, ನಿರಾಶ್ರಿತರಿಗೆ ಹಕ್ಕು ಪತ್ರ ವಿತರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಕಲಬುರಗಿ ಹಾಗೂ ಬೆಣ್ಣೆತೋರಾ ಆಣೆಕಟ್ಟು ಮುಳುಗಡೆ ಹೋರಾಟ ಸಮಿತಿ ನಾಗೂರ ವತಿಯಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಅಭಿಯಂತರಿಗೆ ಮನವಿ ಸಲ್ಲಿಸಲಾಯಿತು.
ಸೂರು ಆಸರೆ ಇಲ್ಲದ ನಾಗೂರು ಬಡವರ ಅಳಲು ಯಾರು ಕೇಳಲಾರದೆ ಕಡೆಗಣಿಸುತ್ತಿರುವುದು ಇದು ಯಾವ ನ್ಯಾಯವಾಗಿದೆ, ಕೆಲವರು ತಮ್ಮ ಸ್ವಂತ ಹಿತಾಶಕ್ತಿ ಪ್ರತಿಷ್ಠೆಯಿಂದ ಬಡಜನರ ಪಾಲಿಗೆ ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿದಂತಾಗಿದೆ. ಬೆಣ್ಣೆತೋರಾ ಅಣೆಕಟ್ಟು ನೀರಿನಿಂದ ಜಮೀನು ಕಳೆದುಕೊಂಡ ನಿರಾಶಿತ್ರರಿಗೆ ಮತ್ತು ಮನೆ ನೀರಿನಲ್ಲಿ ಮುಳುಗಿ ಹೋಗಿ ಅನಾಥರಾದ ನಿಜವಾದ ಕುಟುಂಬಸ್ಥರಿಗೆ ಸೂರು ಆಸರೆ ಇಲ್ಲದೆ ಜನರು ಪರದಾಡುವಂತಾಗಿದೆ. ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಏನು ಪ್ರಯೋಜನ ಆಗಿಲ್ಲ ಎಂದು ದೂರಿದರು.
ಕೆಲವರಿಗೆ ಹಕ್ಕು ಪತ್ರಗಳನ್ನು ನೀಡಿ ಇನ್ನು ಕೆಲವರಿಗೆ ಭೂಮಿ ಇಲ್ಲ ಎಂದು ಕುಂಟು ನೆಪ ಹೇಳಿ ದಿನ ದಾಟಿಸುತ್ತಿದ್ದಾರೆ. ಹೀಗಾಗಿ ಜನರು ಶಾಪ ಹಾಕುತ್ತಿದ್ದಾರೆ. ತಕ್ಷಣವೇ ನಾಗೂರು ಗ್ರಾಮದ ಮುಳುಗಡೆ ಪ್ರದೇಶದ ಎಲ್ಲಾ ಜನರ ಮಾನವೀಯತೆಯ ಹಿತಾದೃಷ್ಟಿಯ ಮೌಲ್ಯಗಳು ಎತ್ತಿ ಹಿಡಿಯುವ ಪ್ರಯತ್ನವಾಗಲಿ ಎಂದು ಆಗ್ರಹಿಸಿದ್ದಾರೆ.
ಎಲ್ಲ ನಿರಾಶ್ರಿತರಿಗೆ ಪುನರ್ ವಸತಿ ಕೇಂದ್ರ (2) ಹತ್ತಿರ ಹೆಚ್ಚಿನ ಭೂಮಿ ಖರೀದಿಸಿ ಹಕ್ಕು ಪತ್ರಗಳು ನೀಡಬೇಕು, ಭೂಮಿ ಮತ್ತು ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ವರೆಗಿನಿ ಮನೆ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಜಂಟಿ ಕಾರ್ಯದರ್ಶಿ ದಿಲೀಪ್ ನಾಗೂರೆ, ಮುಳುಗಡೆ ಪ್ರದೇಶ ಹೋರಾಟ ಅಧ್ಯಕ್ಷ ಚಾಂದ್ ಪಾಶ ಕೇಳಗಿನಮನಿ, ಗೌರವ ಅಧ್ಯಕ್ಷ ಮಡ್ಯಪ್ಪ ಉಪ್ಪಿನ, ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಸಮನಿ ಸೇರಿದಂತೆ ಇತರರು ಇದ್ದರು.







