ಕಲಬುರಗಿ | ಭಾರತೀಯ ಸಂಸ್ಕೃತಿ ಉತ್ಸವಕ್ಕೆ ವಿದ್ಯಾರ್ಥಿಗಳು, ಅಧ್ಯಾಪಕರನ್ನು ನಿಯೋಜಿಸದಂತೆ ಆಗ್ರಹ

ಕಲಬುರಗಿ : ಸೇಡಂನ ಬೀರನಹಳ್ಳಿ ಸಮೀಪದಲ್ಲಿ ಜ.29ರಿಂದ ಫೆ.6ರವರೆಗೆ 9 ದಿನಗಳ ಕಾಲ ''ಭಾರತೀಯ ಸಂಸ್ಕೃತಿ ಉತ್ಸವ" ಆಯೋಜಿಸಲಾಗಿದೆ. ಈ ಧಾರ್ಮಿಕ ಉತ್ಸವಕ್ಕೆ ಸರಕಾರಿ ಮತ್ತು ಖಾಸಗಿ ಕಾಲೇಜುಗಳ ರೋವರ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳನ್ನು ಸ್ವಯಂಸೇವಕರಾಗಿ ನಿಯೋಜಿಸಲು ಹಾಗೂ ಅಧ್ಯಾಪಕರನ್ನು ಭಾಗವಹಿಸಲು ಕಾಲೇಜು ಶಿಕ್ಷಣ ಇಲಾಖೆಯು ನೀಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಒತ್ತಾಯಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದ ಫೆಡರೇಶನ್ ಸದಸ್ಯರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸದ್ಯದಲ್ಲೇ ನಡೆಯುತ್ತಿರುವ ಪದವಿ ಪರೀಕ್ಷೆಗಳ ಸಮಯದಲ್ಲಿ ಈ ರೀತಿಯ ಆದೇಶಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈಗಾಗಲೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಹೊಡೆತ ಬೀಳಲಿದೆ ತಿಳಿಸಿದ್ದಾರೆ.
ಗುಣಮಟ್ಟದ ಶಿಕ್ಷಣ ನೀಡಬೇಕಾದ ಸರಕಾರ ಇಂದು ಕಾಟಚಾರದ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಧಾರ್ಮಿಕ ಕಾರ್ಯಕ್ರಮಗಳ ಸೇವೆಗೆ ಬಳಸುವುದು ತಪ್ಪಾಗಿದೆ. ಈ ಕಾರಣದಿಂದ, ಕಾಲೇಜು ಶಿಕ್ಷಣ ಇಲಾಖೆಯ ಈ ಆದೇಶವನ್ನು ತಕ್ಷಣವೇ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸುಜಾತಾ ವೈ., ಜಿಲ್ಲಾ ಉಪಾಧ್ಯಕ್ಷ ಪ್ರೇಮ್ , ಸಹ ಕಾರ್ಯದರ್ಶಿ ನಾಗಮ್ಮ, ಯುವರಾಜ್, ದರ್ಶನ್, ದ್ರೌಪದಿ, ಪ್ರಜ್ವಲ್ ಮತ್ತಿತರರು ಇದ್ದರು.







